
ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
February 14, 2025 at 11:58 AM
ಫೆ. 21ರಂದು ಮಲೆ ಮಹದೇಶ್ವರಬೆಟ್ಟದಲ್ಲಿ ರಾಜ್ಯಮಟ್ಟದ ಜಾನಪದ ಜಾತ್ರೆ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
▪️ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಶೇಷ ಘಟಕ ಉಪಯೋಜನೆಯಡಿ ವಿವಿಧ ಪ್ರಕಾರದ ಜಾನಪದ ಕಲೆಗಳ ಪ್ರದರ್ಶನವಾದ ‘ಜಾನಪದ ಜಾತ್ರೆ’ ರಾಜ್ಯಮಟ್ಟದ ಕಾರ್ಯಕ್ರಮವನ್ನು ಇದೇ ಫೆಬ್ರವರಿ 21ರಂದು ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರಬೆಟ್ಟದಲ್ಲಿ ಆಯೋಜಿಸಿದ್ದು, ಇದಕ್ಕೆ ಸಕಲ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
▪️ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಾನಪದ ಜಾತ್ರೆ ರೂಪುರೇಷಗಳ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
▪️ಪರಿಶಿಷ್ಟ ಜಾತಿ ಸಮುದಾಯದಲ್ಲಿ ಇರುವ ಕಲೆಗಳನ್ನು ಪುನಶ್ಚೇತನಗೊಳಿಸಿ ಮತ್ತು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಜಾನಪದ ಜಾತ್ರೆ ಶೀರ್ಷಿಕೆಯಡಿಯಲ್ಲಿ ರಾಜ್ಯ ಸರ್ಕಾರ ವಿವಿಧ ಪ್ರಕಾರದ ಜಾನಪದ ಕಲೆಗಳನ್ನು ಒಂದೇ ಸೂರಿನಡಿ ತಂದು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
▪️ರಾಜ್ಯಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆಗೆ ಮಲೆ ಮಹದೇಶ್ವರಬೆಟ್ಟವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಜಿಲ್ಲೆಗೆ ಈ ಅವಕಾಶ ದೊರೆತಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯದ ವಿವಿಧ ಜಾನಪದ ಕಲಾತಂಡಗಳನ್ನು ಗುರುತಿಸಿ 40 ರಿಂದ 45 ವಿವಿಧ ಕಲಾ ಪ್ರಕಾರಗಳ ತಂಡಗಳಿಗೆ ತರಬೇತಿ ಮತ್ತು ಪ್ರದರ್ಶನಕ್ಕೆ ಅವಕಾಶವಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
▪️ಜಾನಪದ ಜಾತ್ರೆ ಕಾರ್ಯಕ್ರಮ ಮಲೆಮಹದೇಶ್ವರ ಬೆಟ್ಟದ ರಂಗಂದಿರದಲ್ಲಿ ಫೆಬ್ರವರಿ 21ರಂದು ಸಂಜೆ ನಿಗದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಜಾನಪದ ಕಲಾವಿದರಿಗೂ ಹೆಚ್ಚಿನ ಅವಕಾಶ ಹಾಗೂ ಆದ್ಯತೆ ನೀಡಬೇಕು. ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 500 ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ಈ ಎಲ್ಲ ಕಲಾವಿದರಿಗೆ ವಾಸ್ತವ್ಯ, ಊಟ ಉಪಹಾರ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
▪️ಕಲಾ ಪ್ರದರ್ಶನಕ್ಕೆ ಬೃಹತ್ ವೇದಿಕೆ, ಉತ್ತಮ ಧ್ವನಿ, ಬೆಳಕು, ವಿನ್ಯಾಸ ಇರಬೇಕು. ಎಲ್ಲವು ಗುಣಮಟ್ಟದ್ದಾಗಿರಬೇಕು. ಕಲಾವಿದರು ಪ್ರದರ್ಶನ ನೀಡಿದ 24 ಗಂಟೆಯೊಳಗೆ ಸಂಭಾವನೆ ಕಲಾವಿದರ ಬ್ಯಾಂಕ್ ಖಾತೆಗೆ ಜಮೆಯಾಗಬೇಕು. ಕಲಾ ಪ್ರದರ್ಶನ ಹಾಗೂ ತಾಲೀಮಿಗಾಗಿ ಕಲಾವಿದರು ಮುಂಚಿತವಾಗಿಯೇ ಆಗಮಿಸಲಿದ್ದಾರೆ. ಇದಕ್ಕೂ ಸೂಕ್ತ ಏರ್ಪಾಡು ಮಾಡಬೇಕು ಎಂದರು.
▪️ಜಾನಪದ ಜಾತ್ರೆ ಸುಸೂತ್ರವಾಗಿ ನಡೆಯಲು ವಿವಿಧ ಸಮಿತಿಗಳನ್ನು ನೇಮಕ ಮಾಡಿ ಜವಾಬ್ದಾರಿ ನೀಡಲಾಗುತ್ತದೆ. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಣ ಇನ್ನಿತರ ಪ್ರಕ್ರಿಯೆಗಳು ಕೈಗೊಳ್ಳಬೇಕಿದೆ. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಸಾಕಷ್ಟು ಮುಂಚಿತವಾಗಿಯೇ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ರಾಜ್ಯಮಟ್ಟದ ಜಾನಪದ ಜಾತ್ರೆ ಯಶಸ್ವಿಗೊಳಿಸಲು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
▪️ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೈಮಹದೇಶ್ವರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಚಾಮರಾಜನಗರ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಉದಯ್ ಕುಮಾರ್, ಜಾನಪದ ಜಾತ್ರೆ ಕಾರ್ಯಕ್ರಮದ ಪ್ರಧಾನ ನಿರ್ದೇಶಕರಾದ ಕುಂತೂರು ಕುಮಾರ್, ನಿರ್ದೇಶಕರಾದ ಹನುಮಂತನಾಯಕ, ಸಂಚಾಲಕರಾದ ಡಾ. ಸಬ್ಬನಹಳ್ಳಿ ರಾಜು, ಕೆ. ನಾಗರಾಜು, ಹೆಚ್.ಸಿ. ನಿಂಗರಾಜು, ಬಿ. ಅನಿಲ್ ಕುಮಾರ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ್, ಹನೂರು ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಇನ್ನಿತರ ಅಧಿಕಾರಿಗಳು ಇದ್ದರು.
#chamarajanagarupdates #chamarajanagar #janapadajatre