
ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
February 14, 2025 at 12:54 PM
ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ : ನ್ಯಾಯಾಧೀಶರಾದ ಈಶ್ವರ
▪️ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಎಲ್ಲರಿಗೂ ಇದ್ದು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ತಿಳಿಸಿದರು.
▪️ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜೀತಪದ್ದತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
▪️ಬಡತನವನ್ನೆ ಬಂಡವಾಳವಾಗಿಸಿಕೊಂಡು ಬಡವರನ್ನು ಜೀವನಪೂರ್ತಿ ದುಡಿಸಿಕೊಳ್ಳಬಾರದು. ಅದು ವ್ಯಕ್ತಿಯ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗಲಿದೆ. ಜೀತಪದ್ದತಿ ನಿರ್ಮೂಲನಾ ಕಾಯ್ದೆಯನ್ನು ಸರ್ಕಾರವು 1976ರಲ್ಲಿ ಜಾರಿಗೊಳಿಸಿದೆ. ದೇಶದ ಪ್ರತಿಯೊಬ್ಬರು ಗೌರವದಿಂದ ಬದುಕಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಕುರಿತ ಹಲವಾರು ಅನುಚ್ಛೇದಗಳನ್ನು ಅಡಕಗೊಳಿಸಿದ್ದಾರೆ. ಎಲ್ಲಿಯೇ ಆಗಲಿ ಜೀತಪದ್ದತಿ ಕಂಡುಬಂದರೆ ಅಂತಹವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವಾಗಬೇಕು ಎಂದು ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು.
▪️ಜೀತಪದ್ದತಿ ನಿರ್ಮೂಲನೆಯ ಅರಿವು ಮೂಡಿಸುವ ಧ್ಯೇಯವಾಕ್ಯಗಳನ್ನು ಮರದ ಪ್ರತಿಕೃತಿಗೆ ಅಳವಡಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಕನಿಷ್ಠ ಬಡವರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಜೀತ ಪದ್ದತಿಗೆ ಸಿಲುಕಿರುವುದನ್ನು ನೋಡಿದ್ದೇವೆ. ಕನಿಷ್ಠ ವೇತನ ನೀಡದೇ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳವುದು ತಪ್ಪಾಗಲಿದೆ ಎಂದರು.
▪️ಜೀತಪದ್ದತಿಯನ್ನು ತೊಲಗಿಸಲು ಜೀತ ವ್ಯಕ್ತಿಗಳನ್ನು ಗುರುತಿಸಿ, ಪರಿಹಾರ ನೀಡಿ ಸಂಪೂರ್ಣವಾಗಿ ಅವಶ್ಯ ಪುನರ್ವಸತಿ ಕಲ್ಪಿಸುವುದು ಜಿಲ್ಲಾಮಟ್ಟದ ಅಧಿಕಾರಿಗಳ ಜವಾಬ್ದಾರಿಯೂ ಆಗಿದೆ. ಜಿಲ್ಲೆಯಲ್ಲಿ 2015-16, 2017ರಲ್ಲಿ ಜೀತಪದ್ದತಿ ಸಮೀಕ್ಷೆ ನಡೆಸಿ 45-52 ಜನರನ್ನು ಗುರುತಿಸಲಾಗಿತ್ತು. ಜೀತದಾಳುಗಳ ಪುನರ್ವಸತಿ ಕಾರ್ಯ ಸದ್ಯದಲ್ಲಿಯೇ ಸಂಪೂರ್ಣಗೊಳ್ಳಲಿದೆ. ಸರ್ಕಾರದ ನೀತಿ, ನಿಯಮಗಳನ್ವಯ ಅವರಿಗೆ ಸಹಾಯಹಸ್ತ ಚಾಚಬೇಕಿದೆ. ಅದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಜೀತಪದ್ದತಿ ನಿರ್ಮೂಲನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಚಾಮರಾಜನಗರವನ್ನು ಜೀತ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣ ತೊಡೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
▪️ಜೀತಪದ್ದತಿ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಜೀತ ಸಾಮಾಜಿಕ ಅನಿಷ್ಠ ಪದ್ದತಿ. ಯಾವುದೋ ಕಾರಣಕ್ಕಾಗಿ ವ್ಯಕ್ತಿಯ ಹಕ್ಕುಗಳನ್ನು, ವೈಯಕ್ತಿಕ ಬದುಕನ್ನು ಬಲವಂತವಾಗಿ ಕಸಿಯುವುದೇ ಜೀತಪದ್ದತಿ. ಜೀತ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಿ ನಾಗರಿಕ ಸಮಾಜದಿಂದ ಜೀತಪದ್ದತಿಯನ್ನು ಸಂಪೂರ್ಣವಾಗಿ ತೊಲಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
▪️ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಜೀತಪದ್ದತಿ ನಿರ್ಮೂಲನೆ ಕಾರ್ಯದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಖ್ಯವಾಗಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಜೀತಪದ್ದತಿಯನ್ನು ಗುರುತಿಸಿ ಜೀತವಿಮುಕ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಅಧಿಕಾರಿಗಳ ತಂಡ ಮುಂದಾಗಬೇಕು ಎಂದರು.
▪️ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಕೀಲರಾದ ರೂಪಶ್ರೀ ಅವರು ಮಾತನಾಡಿ ಜೀತಪದ್ದತಿ ನಿರ್ಮೂಲನೆ ಕುರಿತು ಕಾರ್ಯಗಾರದಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಸವಿವರವಾಗಿ ಮಾಹಿತಿ ನೀಡಿದರು.
▪️ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ. ಲಕ್ಷ್ಮೀ, ಜೀತ ವಿಮುಕ್ತ ಸಂಘಟನೆಯ ಆರ್.ಎಫ್.ಎಫ್ ಜಿಲ್ಲಾ ಸಂಚಾಲಕರಾದ ಜಿ.ಕೆ. ಕುನ್ನಹೊಳಿಯಯ್ಯ, ಇತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
#chamarajanagarupdates #chamarajanagar #jeetapaddathinirmulane #awareness #meeting