
ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
February 17, 2025 at 03:22 PM
ಮಹದೇಶ್ವರಬೆಟ್ಟದಲ್ಲಿ ಮಹಾಶಿವರಾತ್ರಿ, ಯುಗಾದಿ ಜಾತ್ರೆ: ಭಕ್ತಾಧಿಗಳ ಸೌಲಭ್ಯಕ್ಕೆ ಸಮರ್ಪಕ ಸಿದ್ದತೆ ಕೈಗೊಳ್ಳಲು ಶಾಸಕರಾದ ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
▪️ಜಿಲ್ಲೆಯ ಪ್ರಸಿದ್ದ ಯಾತ್ರಾಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳ ಸೌಲಭ್ಯಕ್ಕೆ ಅಗತ್ಯ ಸಿದ್ದತೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಶಾಸಕರಾದ ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
▪️ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಸಂಬಂಧ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ವರ್ಚುವಲ್ ಮೂಲಕ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಭಾಗವಹಿಸುವ ಮೂಲಕ ಸಭೆ ನಡೆಸಿದರು.
▪️ಮಲೆಮಹದೇಶ್ವರ ಕ್ಷೇತ್ರಕ್ಕೆ ನಾಡಿನ ನಾನಾ ಭಾಗಗಳಲ್ಲದೇ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಜಾತ್ರೆಗೆ ಆಗಮಿಸಲಿದ್ದಾರೆ. ಭಕ್ತಾಧಿಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವಾಸ್ತವ್ಯ, ದಾಸೋಹ, ದೇವರ ದರ್ಶನಕ್ಕೆ ಅಗತ್ಯ ಸೌಕರ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಕಲ್ಪಿಸಬೇಕು. ಹೀಗಾಗಿ ಎಲ್ಲ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
▪️ಕ್ಷೇತ್ರದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಬರಲಿರುವುದರಿಂದ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಬೇಕು. ಪಾದಯಾತ್ರೆಯಲ್ಲಿ ಸಹ ಸಾಕಷ್ಟು ಮಂದಿ ಕ್ಷೇತ್ರಕ್ಕೆ ಆಗಮಿಸುವುದರಿಂದ ಮಾರ್ಗ ಮಧ್ಯೆ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಇರುವುದರಿಂದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು, ಇತರೆ ತ್ಯಾಜ್ಯಗಳನ್ನು ಕೊಂಡೊಯ್ಯದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
▪️ಜಾತ್ರಾ ಸಂದರ್ಭದಲ್ಲಿ ನೆರಳಿನ ವ್ಯವಸ್ಥೆ ಇರಬೇಕು. ಶೌಚಾಲಯ, ಸ್ನಾನದ ವ್ಯವಸ್ಥೆಗಳು ಸಮರ್ಪಕವಾಗಿ ಇರಬೇಕು. ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ವೈದ್ಯರು, ಸಿಬ್ಬಂದಿ ನಿಯೋಜಿಸಿ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪಾದಯಾತ್ರಿಗಳು ಬರುವ ಹಿನ್ನೆಲೆಯಲ್ಲಿ ಕೌದಳ್ಳಿ ಆರೋಗ್ಯ ಕೇಂದ್ರದಲ್ಲಿಯೂ ಪೂರ್ಣ ಅವಧಿಯಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಬೇಕು. ಪಾದಯಾತ್ರೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ನೇರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
▪️ಜಾತ್ರಾ ಅವಧಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳು ಕಾರ್ಯಾಚರಣೆಯಾಗಲಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ತಮಿಳುನಾಡು ರಾಜ್ಯದ ಭಾಗಗಳಿಂದಲೂ ಅಲ್ಲಿನ ಸರ್ಕಾರಿ ಬಸ್ಸುಗಳು ಹೆಚ್ಚು ನಿಯೋಜನೆಯಾಗಲಿ. ನಿಗಮದ ಅಧಿಕಾರಿಗಳನ್ನು ಕ್ಷೇತ್ರಕ್ಕೆ ನಿಯೋಜಿಸಿ ಜನರ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳನ್ನು ಮುಂಚಿತವಾಗಿಯೇ ಹಾಕುವ ವ್ಯವಸ್ಥೆಯಾಗಲಿ. ಎಲ್ಲಿಯೇ ಆಗಲಿ ಬಸ್ಸುಗಳಿಗೆ ಯಾವುದೇ ಕೊರತೆಯಾಗದಿರಲಿ ಎಂದು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದರು.
▪️ಕ್ಷೇತ್ರದಲ್ಲಿ ಭಕ್ತಾಧಿಗಳಿಗೆ, ಗಣ್ಯರು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡುವ ಕಾರ್ಯ ಸಮರ್ಪಕವಾಗಿರಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಸಿಬ್ಬಂದಿ ನಿಯೋಜನೆಯಾಗಬೇಕು. ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆ ಇನ್ನಿತರ ಕೈಂಕರ್ಯಗಳ ಬಗ್ಗೆ ಎಲ್.ಇ.ಡಿ ಮೂಲಕ ವೀಕ್ಷಣೆಗೆ ಅವಕಾಶವಾಗಬೇಕು. ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಯಾಗಬೇಕು. ಸುಸೂತ್ರವಾಗಿ ಜಾತ್ರೆ ನಡೆಯಲು ಪೂರಕವಾಗಿರುವ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಶಾಸಕರಾದ ಎಂ.ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
▪️ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು. ಶುದ್ದ ಕುಡಿಯುವ ನೀರು ಸಂಗ್ರಹಣೆ ಪೂರೈಕೆ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುವುದು. ಗ್ರಾಮ ಪಂಚಾಯಿತಿ ವತಿಯಿಂದ ಜಾತ್ರಾ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
▪️ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಶಿವರಾತ್ರಿ ಜಾತ್ರೆಗೆ ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗುತ್ತಿದೆ. ಇಬ್ಬರು ಡಿವೈಎಸ್ಪಿ, 9 ಇನ್ಸ್ಪೆಕ್ಟರ್, 32 ಸಬ್ಇನ್ಸ್ಪೆಕ್ಟರ್, 67 ಸಹಾಯಕ ಸಬ್ಇನ್ಸ್ ಪೆಕ್ಟರ್, 421 ಕಾನ್ಸ್ ಟೇಬಲ್, 98 ಮಹಿಳಾ ಪೊಲೀಸರು, 401 ಗೃಹ ರಕ್ಷಕರು, ಡಿಆರ್ 4 ತುಕಡಿ, ಕೆಎಸ್ಆರ್ಪಿ 1 ತುಕಡಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
▪️ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾ ಎ.ಇ ರಘು ಅವರು ಮಾತನಾಡಿ ಮಹಾಶಿವರಾತ್ರಿ ಜಾತ್ರೆ ಫೆಬ್ರವರಿ 25 ರಿಂದ ಆರಂಭವಾಗಲಿದ್ದು ಮಾರ್ಚ್ 1 ರವರೆಗೆ ನಡೆಯಲಿದೆ. ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 27 ರಿಂದ 30 ರವರೆಗೆ ಜರುಗಲಿದೆ. ಜಾತ್ರಾ ಅವಧಿಯಲ್ಲಿ ಭಕ್ತಾಧಿಗಳಿಗೆ ವಿಶೇಷ ದಾಸೋಹ ಇರಲಿದ್ದು, ಬೆಳಿಗ್ಗೆ 7 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರವಾಗಿ ನಡೆಯಲಿದೆ. ಭಕ್ತಾಧಿಗಳ ಮೂಲ ಸೌಕರ್ಯಕ್ಕಾಗಿ ಎಲ್ಲ ವ್ಯವಸ್ಥೆಳಿಗೆ ಕ್ರಮ ವಹಿಸಲಾಗಿದೆ ಎಂದರು.
▪️ಸಾಲೂರು ಬೃಹನ್ಮಾಠದ ಡಾ. ಶಾಂತಮಲ್ಲಿಕಾರ್ಜುನಸ್ವಾಮಿ, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಗಂಗನತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ.ಬಿ, ಮರಿಸ್ವಾಮಿ, ಆರ್.ಎಸ್. ಕುಮಾರ ವಿಜಯ, ದೇವಾಲಯದ ಅರ್ಚಕರಾದ ಕೆ.ವಿ. ಮಾದೇಶ್, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿ ಪರಮೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
#chamarajanagarupdates #chamarajanagar #mmhills #mahashivarathri #ugadi #jatre #ugadijatre #shivarathrijatre
❤️
1