
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 22, 2025 at 12:53 AM
*ಹರಿದಾಸ ಹೃದಯ*
*ಮಾಘ ಬಹುಳ ನವಮಿ*
*ನೀನೆನ್ನ ಸಲಹಯ್ಯ*
ಪುರಂದರದಾಸರ ಮಾತು *'ನಿನ್ನನೇ ನಂಬಿದೆನು ನೀನೆನ್ನ ಸಲಹಯ್ಯ'*. ಬೇರಾರೂ ಇಲ್ಲವೇ ನಿನ್ನನ್ನು ಬಿಟ್ಟು ಸಲಹುವರು ಎಂದರೆ *'ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ'* ಎಂದಂತೆ ಸಕಲ ಜೀವರಾಶಿಯನ್ನು ಸಲಹುವವನು ಅವನೊಬ್ಬನೆ. ಅದಕ್ಕೆ ಈ ಮಾತು ಎನ್ನುವರು. ಭಗವಂತ 'ನಿನ್ನಲ್ಲೇನಿದೆ, ನಿನ್ನಿಂದ ಪ್ರಯೋಜನವೇನು' ಎಂಬ ಪ್ರಶ್ನೆಗೆ ದಾಸರ ಉತ್ತರ *ಎನ್ನ ಗುಣದೋಷಗಳನೆಣಿಸ ಬೇಡಯ್ಯ ll* ಎನ್ನುವರು. ಕಾರಣ ಶ್ರೀಹರಿ ಭಕ್ತವತ್ಸಲ, ಭಕ್ತಾಪರಾಧಸಹಿಷ್ಣು ಆದ್ದರಿಂದ. ಇನ್ನೊಂದು ಕಡೆ ದಾಸರಂದ ಮಾತು -
*'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟರೆ ಕೆಡಲಿ'* ಎಂದು. ನಂಬಿ ಬಂದವನಾದ್ದರಿಂದ ರಕ್ಷಿಸು ದೇವ ಎನ್ನುವರು. ಇಷ್ಟೆ ಅಂದರೆ ಸಾಲದು. ನಮ್ಮಲ್ಲಿಯ ದೋಷಗಳನ್ನು ಅವನಲ್ಲಿ ನಿವೇದಿಸಿಕೊಂಡು, ಅವನಲ್ಲಿಯ ಗುಣಗಳನ್ನು, ನಿರ್ದೋಷಿ ಎಂಬುದನ್ನು ಸಾರುತ್ತಾ ಅವನಲ್ಲಿಯೇ ಮೊರೆಹೋಗಬೇಕು. *'ದೋಷಿಗಳೊಳಗೆ ಹಿರಿಯ ನಾ, ನಿರ್ದೋಷಿಗಳರಸೆ ವಿಟ್ಠಲಾ' ll* ಎಂದು ಶರಣು ಹೋಗಬೇಕು. ದಾಸರು ಎಲ್ಲ ಸಜ್ಜನರ ಪರವಾಗಿ, ಇರುವ ತತ್ವಾಂಶವನ್ನು ಭಗವಂತನ ಮುಂದಿಡುವರು. ನಮ್ಮ ಜೀವನ - ಬದುಕು - ಬವಣೆ ಹೇಗಿದೆ ಎಂದರೆ -
*ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು*
*ಮೇಲೆ ಯೌವನಮದದಿ ಮುಂದರಿಯದಿದ್ದೆ l*
*ಜಾಲ ಸಂಸಾರದಲಿ ಸಿಲುಕಿ ಬಳಲಿದೆನಯ್ಯ*
*ಪಾಲಿಸೋ ಪರಮಾತ್ಮ ಭಕ್ತಿಯ ಕೊಟ್ಟು ll*
ಪ್ರಹ್ಲಾದರಾಜರು ದೈತ್ಯ ಬಾಲಕರಿಗೆ ಉಪದೇಶಮಾಡಿದ್ದು ಇದನ್ನೆ. ಬಾಲ್ಯ, ಕೌಮಾರ, ಯೌವನಾದಿ ಅವಸ್ಥೆಗಳಲ್ಲಿ ಯಾವ ಸಾಧನೆಯನ್ನೂ ಆಚರಿಸಲಾಗದು. ಸಂಸಾರದ ಬಂಧನದಿಂದ ಹೊರಬರಲಾಗದು. ಅದಕ್ಕೆ ಅವನನ್ನೇ ಮೊರೆಹೊಕ್ಕು ಪಾಲಿಸಯ್ಯ ಎಂದು ಬೇಡುವರು. ಇಷ್ಟಲ್ಲದೆ -
*ಆಸೆಯೆಂಬುದು ಅಜನ ಲೋಕವನು ಮುಟ್ಟುತಿದೆ l*
*ವಾಸುದೇವನ ಸ್ಮರಣೆಯೊಮ್ಮೆಯಾದರು ಈಲ್ಲ l*
*ಈ ತೆರದಿ ಕಾಲವನು ಇಂಡಿರೇಶನೆ ಕಳೆದೆ l*
ಇಷ್ಟೆಲ್ಲಾ ಬಿನ್ನೈಸಿಕೊಂಡ ದಾಸರು ಕಡೆಗೆ ಶ್ರೀಹರಿಯಲ್ಲಿ ಕೇಳುವುದು ಹೀಗಿದೆ -
*ಮಾತೆ ತನ್ನಯ ಶಿಶುವ ಮನ್ನಿಸುವ ತೆರನಂತೆ l*
*ದಾತ ಪುರಂದರವಿಟ್ಠಲ ದಯಮಾಡಿ ಸಲಹೋ ll - ಶ್ರೀಪುರಂದರದಾಸರು.*
ಈ ಕೂಗು ಎಲ್ಲರ ಕೂಗಾಗಬೇಕು. ಆಗ ಮಾತ್ರ ಭಗವಂತನ ಒಲುಮೆ ಕಾಣಲು ಸಾಧ್ಯ. ಅವರವರ ವರ್ಣಾಶ್ರಮ ಉಚಿತವಾದ, ಧರ್ಮಾಚರಣೆಯಲ್ಲಿದ್ದು, ಶ್ರೀಹರಿಯ ಮಹಾತ್ಮ್ಯೆಜ್ಞಾನವನ್ನು ಸಾಧ್ಯವಾದಷ್ಟು ಪಡೆದು, ಆದಿಯಿಂದ ಅಂತ್ಯದವರೆಗೂ *'ನೀನೆನ್ನ ಸಲಹಯ್ಯ'* ಎಂಬ ಮಂತ್ರದಿಂದ ನಡೆದಲ್ಲಿ ಈ ಜನ್ಮದಲ್ಲಿ ಜನ್ಮಜನ್ಮಾಂತರದಲ್ಲಿ ಅವನ ಅನುಗ್ರಹವಾಗಿ ಸದ್ಗತಿಯನ್ನು ಹೊಂದಲುಬಹುದು.
* * * * * *
*ಅನ್ನಮಯ ಪ್ರಾಣಮಯ ಆನಂದಮಯ ನೀನೆ l - ಹ.ಭೀ.*
* * * * * *
*ಹರಿದಾಸ ಹೃದಯ ಗ್ರಂಥದಿಂದ*
🙏
1