
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 25, 2025 at 02:44 AM
*ಹರಿದಾಸ ಹೃದಯ*
*ಮಾಘ ಬಹುಳ ದ್ವಾದಶಿ*
*ಗರುಡ - ಶೇಷರು*
ದೇವತಾ ತಾರತಮ್ಯದಲ್ಲಿ ಗರುಡಶೇಷರು ಐದನೇಯ ಕಕ್ಷಾದಲ್ಲಿ ಬರುವ ದೇವತೆಗಳು. ಇಬ್ಬರು ಶ್ರೀಹರಿಯ ಸೇವೆಯಲ್ಲಿ ಸದಾನಿರತರು. ಗರುಡ ಭಗವಂತನ ವಾಹನವಾದರೆ, ಶೇಷ ಸದಾ ಮೈಮೇಲೆ ಮಲಗಿಸಿಕೊಂಡ ಶಯನ. ಇಬ್ಬರೂ ವೇದಾಭಿಮಾನಿಗಳಾಗಿ ಮನೋಭಿಮಾನಿಗಳೂ ಆಗಿರುವರು. ಕೆಳಗಿನ ಜೀವಜಾತಕ್ಕೆ ನಿಯಾಮಕರು. ಕಶ್ಯಪ ಪ್ರಜಾಪತಿಗಳ ಮಕ್ಕಳು. ಸಮರೆನಿಸಿರುವರು. ಜಗನ್ನಾಥದಾಸರು ತಮ್ಮ ಮೇರುಕೃತಿ ಹರಿಕಥಾಮೃತಸಾರದಲ್ಲಿ ಪ್ರಾರ್ಥಿಸಿದ್ದು ಹೀಗಿದೆ -
*ಜಗದುದರನ ಸುರೋತ್ತಮನ ನಿಜಪೆಗಲೊಳಾನ್ತು ಕರಾಬ್ಜದೊಳು ಪದ-*
*ಯುಗ ಧರಿಸಿ ನಖಪಂಕ್ತಿಯೊಳು ರಮಣೀಯತರವಾದ l*
*ನಗಧರನ ಪ್ರತಿಬಿಂಬ ಕಾಣುತಮಿಗೆ ಹರುಷದಿಂದ ಪೊಗಳಿ ಹಿಗ್ಗುವ l*
*ಖಗಕುಲಾಧಿಪ ಕೊಡಲಿ ಮಂಗಳ ಸಕಲ ಸುಜನರಿಗೆ ll - ಹ.ಸಾರ (32-8)*
ಭಗವಂತನ ಸಾನ್ನಿಧ್ಯದಲ್ಲಿ ಅವನನ್ನೇ ಕಾಣುತ್ತಾ ನಲಿಯುವ ಧನ್ಯಾತ್ಮ ಗರುಡ. ಇವರಿಗೆ ಅವತಾರವಿಲ್ಲ. ಸೌಪರ್ಣಿಯ ಪತಿ ಪಕ್ಷಿರಾಜ ಸಮುದ್ರಮಥನಕ್ಕಾಗಿ ಮಂದರ ಪರ್ವತವನ್ನು ತಂದ. ಹಾಗೇ ಅಮೃತಕಲಶವನ್ನೂ ತಂದವನು. ಬಲಿಕದ್ದೊಯ್ದಿದ್ದ ವಿಷ್ಣುವಿನ ಕಿರೀಟವನ್ನು ಕೃಷ್ಣನಿಗಿಟ್ಟು ಇಬ್ಬರು ಒಂದೇ ಎಂದು ಸಮರ್ಥಿಸಿದ.
ಶೇಷದೇವರು ಜೀವರ ಅಭಿಮಾನಿದೇವತೆ. ವಾರುಣಿಯ ಪತಿ ಅನಂತನೆನಿಸಿದ ಇವನು ತನ್ನ ಅನಂತ ಹೆಡೆಗಳ ಮೇಲೆ ಬ್ರಹ್ಮಾಂಡವನ್ನು ಸಾಸಿವೆಕಾಳಿನಂತೆ ಹೊತ್ತಿರುವ. ಜಗನ್ನಾಥದಾಸರು ಇವನನ್ನು ಪ್ರಾರ್ಥಿಸಿದ್ದು ಹೀಗೆ -
*ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕವಿನುತನ ಪರಮನು-*
*ರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ l*
*ಭೂಗಗಗನಪಾತಾಳವ್ಯಾಪ್ತನ ಯೋಗನಿದ್ರಾಸ್ಪದನೆನಿಪ ಗುರು*
*ನಾಗರಾಜನ ಪದಕೆ ನಮಿಸುವೆ ಮನದೊಳನವರತ ll -ಹ.ಸಾರ (32-9)*
ವೇದ ಆಗಮಗಳಿಂದ ಸ್ತುತ್ಯನಾದ, ಸದಾ ಶ್ರೀಹರಿಯನ್ನು ಸ್ತುತಿಸುತ್ತಿರುವ ನಾಗರಾಜನನ್ನು ನಮಿಸುವರು. ಶೇಷದೇವರು ತ್ರೇತೆಯಲ್ಲಿ ಲಕ್ಷ್ಮಣನಾಗಿ, ದ್ವಾಪರದಲ್ಲಿ ಬಲರಾಮನಾಗಿ ಅವತರಿಸಿ ಶ್ರೀಹರಿಯ ಒಡನಾಟದಲ್ಲಿದ್ದ ಧನ್ಯಾತ್ಮ. ಈ ಸರ್ಪರಾಜ ಭೂಮಿಯ ಅಧೋಭಾಗಕ್ಕೆ ಅಧಿಪತಿ. ಈ ಶೇಷದೇವನಿಂದಾಗಿ ತಿರುಪತಿಯ ವೇಂಕಟಾಚಲಕ್ಕೆ ಹಿಂದೆ ಶೇಷಾಚಲವೆಂಬ ಹೆಸರಿತ್ತು.
ಬ್ರಹ್ಮಸೂತ್ರಕಾರರು ಅಂತಿಮ ಲಯ ಕ್ರಮವನ್ನು ನಿರೂಪಿಸಿದಾಗ ಶೇಷಮಾರ್ಗ, ಗರುಡಮಾರ್ಗವೆಂದು ನಿರ್ದೇಶಿಸಿರುವರು. ಕಡೆಗೆ ಗರುಡಶೇಷರು ಸರಸ್ವತಿಯಲ್ಲಿ, ಸರಸ್ವತಿಯು ಚ.ಬ್ರಹ್ಮರಲ್ಲಿ, ಬ್ರಹ್ಮರು ಲಯವಿಲ್ಲದ ಲಕ್ಷ್ಮೀದೇವಿಯಲ್ಲಿ - ಹೀಗೆ ಪತ್ನಿಯರೊಂದಿಗೆ ಮೋಕ್ಷ ಹೊಂದುವರೆಂದು ಹೇಳಲಾಗಿದೆ.
* * * * * *
*ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ l - ಶ್ರೀಪು.*
* * * * * *
*ಹರಿದಾಸ ಹೃದಯ ಗ್ರಂಥದಿಂದ*