Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 28, 2025 at 12:53 AM
*ಹರಿದಾಸ ಹೃದಯ* *ಮಾಘ ಬಹುಳ ಅಮಾವಾಸ್ಯೆ* *ವೈಕುಂಠ ವೈಭವ* *'ವೈಕುಂಠಹ ಪುರುಷಃ ಪ್ರಾಣಹ .....'* ಹೀಗೆ ಮಹಾವಿಷ್ಣುವಿನ ಒಂದು ಹೆಸರು ವೈಕುಂಠ. ಉತ್ತಮ ಜೀವರು ತಮ್ಮ ಸಾಧನೆಗಳನ್ನು ಪೂರೈಸಿ, ಭಗವಂತನ ಅನುಗ್ರಹದಿಂದ ಹೊಂದುವ ಸ್ಥಾನವೂ ವೈಕುಂಠ. ಇದನ್ನೇ ಮೋಕ್ಷವೆಂದು ಶಾಸ್ತ್ರಗಳ ನಿರ್ಣಯ. ನಿತ್ಯ ನೀರ್ದುಃಖಾನಂದಾನುಭವಸ್ಥಿತಿರೂಪದ ಸ್ಥಾನ ಇದಾಗಿದೆ. ವಿಷ್ಣುವಿನ ಅತ್ಯರ್ಥಪ್ರಸಾದದಿಂದ ಮಾತ್ರ ಲಭಿಸುವ ಮಹತ್ಫಲ. ಅವನಲ್ಲಿ ಜ್ಞಾನಪೂರ್ವಕ ಮಾಡುವ ನಿಶ್ಚಲವಾದ ಶುದ್ಧವಾದ ನಿರಂತರದ ಭಕ್ತಿಯಿಂದ ಲಭ್ಯ. ಲಕ್ಷ್ಮ್ಯಾತ್ಮಕ ಲೋಕವಾದ ವೈಕುಂಠದಲ್ಲಿ ಭಗವಂತನ ನಿತ್ಯ ವಿನೂತನರೂಪ ಸಾನ್ನಿಧ್ಯದಿಂದಾಗಿ ಸರ್ವದಾ ಪವಿತ್ರತಮ. ಮುಕ್ತಿ ಯೋಗ್ಯರಿಗೆ ಮಾತ್ರ ಪ್ರವೇಶವಿರುವ ಇಲ್ಲಿಯ ಮುಕ್ತರ ವೈಭವದ ಬಗ್ಗೆ ನಾರಾಯಣ ಪಂಡಿತರು ಅಂದದ್ದು - *ಯಂಯಂ ಸುಖೀಕಾಮಯತೇsರ್ಥಮತ್ರ, ಸಂಕಲ್ಪಮಾತ್ರಾತ್ ಸಕಲೋsಪಿಸಸ್ಯಾತ್'* ಸಂಕಲ್ಪ ಮಾತ್ರದಿ ಏನನ್ನೂ ಪಡೆಯಬಹುದು. ಸಕಲಪುರುಷಾರ್ಥ ಅಪ್ರಯತ್ನ ಸಿದ್ಧ. ಭಗವಂತನನ್ನು ಪ್ರತ್ಯಕ್ಷವಾಗಿ ನಿತ್ಯದಲ್ಲೂ ಕಾಣುವ ಸೌಭಾಗ್ಯ. ಶ್ರೀವಾದಿರಾಜರು ತಮ್ಮ ವೈಕುಂಠವರ್ಣನೆಯಲ್ಲಿ ಹೇಳಿದ ಮಾತು - *'ಎಂದೆಂದು ಕುಂಠನವೆಂಬ ನಾಶವಿಲ್ಲದಿಂದಿರೇಶನೆ ವೈಕುಂಠ'* *'ನಶ್ವರವಲ್ಲದ ಈ ಪದವೇ ಬುಧರಿಗೆ ಶಾಶ್ವತಸ್ಥಾನವೆನಿಪುದು'* ಹೆಚ್ಚಿನ ವಿವರ ಶ್ರೀವಾದಿರಾಜರ ವೈಕುಂಠವರ್ಣನೆ, ಮೋಹನದಾಸರ ಕೋಲುಹಾಡು, ಸುಮಧ್ವವಿಜಯದ ಏಕಾದಶಸರ್ಗ ಮುಂತಾದಲ್ಲಿ ನೋಡಬಹುದು. ಅಪ್ರಾಕೃತಮಯವಾದ ವೈಕುಂಠ ಲೋಕದ ಬಗ್ಗೆ ಹೇಳುವಾಗ ರಾಜರ ವರ್ಣನೆ - *ರನ್ನಕೆತ್ತಿಸಿದ ಚಿನ್ನದೊಳು ಕೋಟೆ ಮನ್ಮಥನಯ್ಯನ ಪುರಿಗೆ l* *ತನ್ಮಧ್ಯದಲಿ ಅಯೋಧ್ಯವೆಂಬ ನಗರಿ ಸುವರ್ಣಗೊಪುರದ ಲೊಪ್ಪಿಹವು ll* *ಶಿರಿದೇವಿ ತಾನೆ ಮುರಹರನ ಪಟ್ಟಣದೊಳು ಪರಿಪರಿಯ ಮನೆಯರೂಪದಲ್ಲಿ l* *ಮಿರಮಿರನೆ ಮಿಂಚುವಳು ಹಚ್ಚ ಪ್ರಕೃತಿಯಿಂದ ವಿರಚಿತಗೃಹಗಳೊಪ್ಪಿಹವು ll* ಭಗವಂತ ಶ್ರೀಕೃಷ್ಣ ತಾನೇ ತನ್ನ ಲೋಕವಾದ ವೈಕುಂಠದ ಬಗ್ಗೆ ಅಂದದ್ದು - *ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ l* *ಯದ್ಗತ್ವಾ ನ ನಿವರ್ತಂತೇ ತದ್ದಾಮ ಪರಮಂ ಮಮ ll - "ಗೀತಾ (15-6)* ಶ್ರೀರಾಜರೇ ವೈಕುಂಠನಗರಿ ಬಗ್ಗೆ ಆಡಿದ ಮಾತು ಹೀಗಿದೆ - *'ಅನರ್ಘ್ಯರತುನಮಂದಿರಗಳೊಳು ಪ್ಪರಿಗೆಗಳ ಬಣ್ಣಿಸಲೆನ್ನಳವಲ್ಲ'* *ಮೋಕ್ಷಂ ಪರಂಪದಂ ದಿವ್ಯಮಮೃತಂ ವಿಷ್ಣುಮಂದಿರಮ್ l* *ಅಕ್ಷರಂ ಪರಮಂ ಧಾಮ ವೈಕುಂಠಮ್ ಶಾಶ್ವತಂ ಪದಮ್ ll* ಮುಕ್ತಿಯಲ್ಲಿ ನಾಲ್ಕು ಪ್ರಕಾರಗಳಿವೆ. ಇವುಗಳಲ್ಲಿ ಯೋಗ್ಯರಾದ ಮುಕ್ತಜೀವರು ವಾಸಿಸಿ ಸುಖದಿಂದಲಿಪ್ಪರು. *ಸಾಯುಜ್ಯ ಸಾಲೋಕ್ಯ ಸಾಮೀಪ್ಯ ಸಾರೂಪ್ಯ* *ಈ ಯಂದದಿ ಚತುರ್ವಿಧ ಮುಕುತಿಯೊಳು l* *ಮುಕ್ತರ ಭೋಗಕ್ಕೆ ತಕ್ಕ ಫಲಗಳ ಹೊತ್ತು ಹೊತ್ತಿಲಿ ಕೊಡುತಿಪ್ಪ ll* *ನಿತ್ಯ ನಿರ್ದುಃಖಸುಖಸ್ವರೂಪರಾಗಿ ಸುತ್ತ ಸುಳಿವರು ಲೀಲೆಯಲ್ಲಿ ll* *ಜಕ್ಷನ್ ಕ್ರೀಡನ್ ರಮಮಾಣಹ* ಎಂಬ ಶ್ರುತಿಗಳಲ್ಲೂ ಮುಕ್ತರ ಭೋಗಗಳ ಬಗ್ಗೆ ವರ್ಣಿತವಾಗಿದೆ. ವಾಯುಸ್ತುತಿಯಲ್ಲಿ ಮುಕ್ತರ ವೈಭವದ ಬಗ್ಗೆ 'ಆನಂದಾನ್ಮಂದಮಂದಾ...' ಎಂಬಲ್ಲಿ ವರ್ಣಿತವಾಗಿದೆ. ಮೋಹನದಾಸರು ತಮ್ಮ ಕೋಲು ಹಾಡು ಕೃತಿಯಲ್ಲಿ ವೈಕುಂಠದ ಬಗ್ಗೆ - *ಅಪ್ಪನಾರಾಯಣನಿಪ್ಪಂಥ ಅರಮನೆ l ಅಪ್ರಾಕೃತವಾದ ವೈಕುಂಠ ಕೋಲೆ l* *ಅಪ್ರಾಕೃತ ವೈಕುಂಠವೆಂಬೋರು ಸ್ವಪ್ರಕಾಶದ ಪರಮಾತ್ಮ ಕೋಲೆ ll* ಎಂದರು. ದಾಸರು ಹೇಳಿದ ಕೆಲ ಮಾತುಗಳನ್ನು ನೋಡೋಣ - ವೈಕುಂಠದಲ್ಲಿ, *ಅಲ್ಲಿ ಸರ್ವರು ಸುಖದಲ್ಲಿ ಇಪ್ಪರು, ಅಲ್ಲಿ ಸರ್ವರೂ ಯಶಸ್ವಿಗಳು, ಮಂಗಳವಂತರು,* ಕಾಮಕ್ರೋಧದರ್ಪವೆಂಬ ಮಾತುಗಳಿಲ್ಲ, ಪ್ರೇಮವನ್ಯೋನ್ಯಮಿತ್ರತ್ವ, ಕಂಟಕವೆಂಬುದು ಕನಕಕೇತಕಿಯಲ್ಲಿ, ಬಂಜೆಯರಿಲ್ಲ, ವಿಧವೆಯರಿಲ್ಲ, ವಿಧುರ ಪುರುಷರಿಲ್ಲ, ಮಂದಭಾಗ್ಯರು ಇಲ್ಲ, ಅಲ್ಲಿದ್ದ ತೃಣ ವೃಕ್ಷ ಅಚ್ಛೇದ್ಯ ಅಭೇದ್ಯವು, ಅಲ್ಲಿ ಪಂಚವಿಧ ತಾರತಮ್ಯಗಳುನ್ಟು, ಅಲ್ಲಿ ನೀಚೊಚ್ಚಭಾವವು, ಹೀಗೆ ಅನೇಕವಾಗಿ ವರ್ಣಿಸಲ್ಪಟ್ಟಿದೆ. *ಒಬ್ಬ ಬ್ರಹ್ಮನು ಪುರಾಣ ಪೇಳ್ವ ಕೋಲೆ, .....* ಹೀಗೆ ಶ್ರುತಿಗಳಲ್ಲಿ, ವ್ಯಾಸ - ದಾಸ ಸಾಹಿತ್ಯದಲ್ಲಿ ವೈಕುಂಠ ವರ್ಣನೆ ಬಗ್ಗೆ ವಿಪುಲ ಸಾಹಿತ್ಯವಿದೆ. *'ನ ಚ ಪುನರಾವರ್ತತೇ'* ಎಂದಂತೆ ಅಲ್ಲಿಗೆ ಹೋದ ಮುಕ್ತಿಯೋಗ್ಯ ಮತ್ತೆ ಸಂಸಾರಕ್ಕೆ ಬಾರ. ಹುಟ್ಟು - ಸಾವುಗಳೆಂಬ ಚಕ್ರದಿಂದ ಶಾಶ್ವತವಾದ ಮುಕ್ತಿ. ಹೆಚ್ಚಿನದನ್ನು ಅಲ್ಲಿಯೇ ನೋಡಿ ತಿಳಿಯಬೇಕು. ಭಗವಂತನ ನಿತ್ಯನೆಲೆಯಾದ ಅಪ್ರಾಕೃತವಾದ ದುಃಖಲೆಶವಿಲ್ಲದ ಶಾಶ್ವತ ಸುಖಸ್ವರೂಪದ ಸ್ಥಾನವಾದ ವೈಕುಂಠವನ್ನೇ ಬಯಸಿ ತಮ್ಮ ತಮ್ಮ ವರ್ಣ ಆಶ್ರಮ ಉಚಿತ ಸಾಧನೆಗಳನ್ನು ಶಾಸ್ತ್ರೋಕ್ತ ರೀತಿಯಿಂದ ಗುರುಗಳ ಉಪದೇಶಪೂರ್ವಕ, ಶ್ರೀಮದಾಚಾರ್ಯರ ಮಾತಾವಲಂಬಿಗಳಾಗಿ ನಡೆದು ಇಂತಹ ವರ್ಣಿಸಲಶಕ್ಯವಾದ ಸ್ಥಾನವನ್ನು ಅವನ ಅನುಗ್ರಹದಿ ಪಡೆಯಬೇಕೆಂಬುದು ಸದಾಗಮಗಳ ನಿರ್ಣೀತ ತತ್ತ್ವ. ಈ ವೈಕುಂಠ ಲೋಕದ ಬಗ್ಗೆ ತಿಳಿದವರಿಗೆ ಸರ್ವಮಂಗಳವು. *ವೈಕುಂಠ ಲೋಕವೆಂಬ ಪುರದ ಕಥೆಯ ಪ -* *ರಾಕುವಿಟ್ಟು ಕೇಳ್ವ ಜನರ ಶ್ರೀಕಾಂತಕಾವ .....ll* * * * * * * *ನಿನ್ನ ನೆನೆವೋ ಸಂತೋಷ ಎನಗಾಗಲಿ l - ಶ್ರೀ ಶ್ರೀ.* *ಯಾರೂ ಸಂಗಡ ಬಾಹೋರಿಲ್ಲ l - ಶ್ರೀಪು.* * * * * * * *ಹರಿದಾಸ ಹೃದಯ ಗ್ರಂಥದಿಂದ*

Comments