Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
March 1, 2025 at 12:50 AM
*ಹರಿದಾಸ ಹೃದಯ* *ಫಾಲ್ಗುಣ ಶುದ್ಧ ಬಿದಿಗೆ* *ಬೇಕುಗಳ ಪಟ್ಟಿ* ಮನುಷ್ಯನಾಗಿ ಹುಟ್ಟಿಬಂದ ಜೀವಿಗೆ ಇರಬೇಕಾದ, ಮಾಡಬೇಕಾದ, ನಡೆಯಬೇಕಾದ ಗುಣಗಳನ್ನು ಸುಂದರವಾಗಿ ಸಂಗ್ರಹಿಸಿ ಶ್ರೀವ್ಯಾಸರಾಜರು ಪಟ್ಟಿಮಾಡಿ ನಮ್ಮ ಮುಂದಿಟ್ಟಿದ್ದು ಹೀಗಿದೆ - *ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ll ಪ ll* *ಭೂತದಯಾಪರನಾಗಿರಬೇಕು* *ಪಾತಕವೆಲ್ಲಾ ಕಳೆಯಲು ಬೇಕು* *ಮಾತು ಮಾತಿಗೆ ಹರಿಯೆನ ಬೇಕು ll 1 ll* *ಶಾಂತಿ ಕ್ಷಮೆ ದಯೆ ಹಿಡಿಯಲು ಬೇಕು* *ಭ್ರಾಂತಿ ಕ್ರೋಧವ ಕಳೆಯಲು ಬೇಕು* *ಸಂತತ ಸನ್ಮಾರ್ಗದಲಿರಬೇಕು ll 2 ll* *ಕಾಮ ಕ್ರೋಧವ ತಾ ಬಿಡಬೇಕು* *ಮಮತಾಹಂಕಾರವ ಕಳೆಯಲು ಬೇಕು* *ಸೌಮ್ಯರ ಸಂಗದೊಳು ಇರಬೇಕು ll 3 ll* *ವೇದಶಾಸ್ತ್ರವ ನೋಡಲು ಬೇಕು* *ಭೋದತತ್ತ್ವ ತಿಳಿಯಲು ಬೇಕು* *ಮಾಧವನ ಸ್ಮರಣೆ ಮಾಡಲು ಬೇಕು ll 4 ll* *ತಂದೆ ಕೃಷ್ಣನ ದಯವಿರಬೇಕು* *ಬಂದುದ ಉಂಡು ಸುಖ ಪಡಬೇಕು* *ಚಂದಾಗಿ ಜಗದೊಳು ಇರಬೇಕು ll 5 ll* *-ಶ್ರೀವ್ಯಾಸರಾಜರು* ಶ್ರೀರಾಜರು ಇಲ್ಲಿ ಕೊಟ್ಟಿರುವ ಬೇಕುಗಳ ವಿಷಯಗಳು ಪ್ರತಿಯೊಬ್ಬನ ಜೀವನದಲ್ಲೂ ನಿತ್ಯವೂ ಹಾಸುಹೊಕ್ಕಾಗಿ ಹಬ್ಬಿರುವ ವಿಷಯಗಳಾಗಿವೆ. ಇವುಗಳ ಪಾಲನೆಯಿಂದ ಜೀವನ ನೆಮ್ಮದಿ. ಕುಟುಂಬ - ಸಮಾಜದಲ್ಲಿ ಶಾಂತಿ. ಅತಿ ಮುಖ್ಯವಾದ ಅವರ ಆಶಯವು ಸದಾ ಜಿಹ್ವೆಯಲ್ಲಿ ಹರಿನಾಮ ಸ್ಮರಣೆ ಇರಬೇಕೆಂಬುದು. ಇವರೇ ಒಂದು ಕಡೆ - *ಕೃಷ್ಣ ಕೃಷ್ಣ ಕೃಷ್ಣ ಯೆಂದು ಮೂರು ಬಾರಿ ನೆನೆಯಿರೊ* *ಸಂತುಷ್ಟನಾಗಿ ಮುಕುತಿಕೊಟ್ಟು ಮಿಕ್ಕ ಭಾರ ಹೊರುವನೋ ll* ಎಂದಿರುವರು. * * * * * * *ಏನು ಅರಿಯದ ಮೂಢ ಮಾನವನು ನಾನು l - ಶ್ರೀಜ.* * * * * * * *ಹರಿದಾಸ ಹೃದಯ ಗ್ರಂಥದಿಂದ*

Comments