Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
March 1, 2025 at 05:54 PM
ಆಂಜನೇಯನ ಭಕ್ತರಿಗೆ ಶನಿ ಕಾಟವಿಲ್ಲ:- ಸೂರ್ಯಪುತ್ರ ಶನಿದೇವನು ಯಾರ ಮೇಲಾದರೂ ವಕ್ರದೃಷ್ಟಿ ಬೀರಿದರೆ ಏಳೂ ವರೆ ವರ್ಷ (ಸಾಡೆ ಸಾತಿ) ಶನಿ ಕಾಟ ಶುರುವಾಗುತ್ತದೆ ಎಂಬ ಭಯ ಎಲ್ಲರಿಗೂ ಇರುತ್ತದೆ. ಆದರೆ ಹನುಮಂತನ ಭಕ್ತರಿಗೆ ಮಾತ್ರ ಶನಿಯ ಭಯವಿಲ್ಲ ಯಾಕೆ ? ಶನಿ ಮತ್ತು ವಾನರನ ನಡುವೆ ಏನು ನಡೆಯಿತು? ಹನುಮಂತನಿಗೆ ಶನಿದೇವ ಏನು ವಚನ ಕೊಟ್ಟನು. ಹೀಗೊಂದು ಪುರಾಣ ಕಥೆ. ಒಮ್ಮೆ ಶನಿದೇವನಿಗೆ ಅಹಂಕಾರ ಬಂದಿತು. ತನ್ನಷ್ಟು ಶಕ್ತಿಶಾಲಿ ಯಾರೂ ಇಲ್ಲ. ತನ್ನ ದೃಷ್ಟಿ ಮಾತ್ರದಿಂದಲೇ ಜನಗಳನ್ನು ಕಷ್ಟ ಕೋಟಲೆಗಳಿಗೆ ತಳ್ಳುವ ಶಕ್ತಿ ತನಗಲ್ಲದೆ ಇನ್ನಾರಿಗೆ, ಎಂಬ ಅಹಂಕಾರ ಅವನ ನೆತ್ತಿಗೇರಿತು. ಇದೆ ಅಹಂಕಾರದ ಮದದಲ್ಲಿ ವಾನರನ ಬಳಿ ಬಂದನು. ಅದು ಸಂಜೆಯ ಸಮಯ ಆಂಜನೇಯ ರಾಮನಾಮ ಸ್ಮರಣೆಯಲ್ಲಿ ತಲ್ಲೀನನಾಗಿದ್ದನು. ಶನಿ ಆಂಜನೇಯನ ಮೇಲೆ ವಕ್ರದೃಷ್ಟಿ ಬೀರಿದ ಆದರೆ ಆಂಜನೇಯನಿಗೆ ಏನೂ ಆಗಲಿಲ್ಲ. ರಾಮನ ಧ್ಯಾನದಲ್ಲಿ ಇರುವುದನ್ನು ಕಂಡು ಕಸಿವಿಸಿ ಗೊಂಡ ಶನಿ ಕೂಗಿದ ಏಯ್ ವಾನರ ನಿನ್ನ ಮುಂದೆ ಯಾರು ನಿಂತಿದ್ದಾರೆ ನೋಡು ಎಂದ. ಆಂಜನೇಯ ಮಿಸುಕಾಡಲಿಲ್ಲ, ದರ್ಪದಿಂದ ಶನಿ ಅರಚಾಡಿ ಕೂಗಾಡಿದರೂ, ರಾಮಧ್ಯಾನದಲ್ಲಿ ನಿರತನಾಗಿದ್ದ ಆಂಜನೇಯ ಮಿಸುಗಾಡಲಿಲ್ಲ. ಮಾಡ್ತೀನಿ ಇವನಿಗೆ ಅಂತ ಶನಿದೇವ ತನ್ನ ವಕ್ರದೃಷ್ಟಿ ಹನುಮನ ಮೇಲೆ ಬೇರಿದ. ಇದೂ ಸಹ ವಾಯುಪುತ್ರನ ಮೇಲೆ ಪ್ರಭಾವ ಬೀರಲಿಲ್ಲ. ಮತ್ತಷ್ಟು ಕೋಪಗೊಂಡ ಶನಿ, ಏಯ್ ವಾನರ ಕಣ್ಣು ತೆರೆದು ನೋಡು ನಿನ್ನ ಸುಖ ಸಂತೋಷ ನೆಮ್ಮದಿಯನ್ನು ಹಾಳು ಮಾಡಲು ಬಂದಿದ್ದೇನೆ. ನನ್ನನ್ನು ಎದುರಿಸುವ ಶಕ್ತಿ ನಿನಗಿಲ್ಲ, ನೋಡೀಗ ನಾನು ನಿನ್ನ ರಾಶಿಯಲ್ಲಿ ಪ್ರವೇಶ ಮಾಡುತ್ತೇನೆ. ಆಗ ನಿನಗೆ ನನ್ನ ಶಕ್ತಿ ಏನು ಅಂತ ಗೊತ್ತಾಗುತ್ತೆ ಎಂದಾಗ, ಆಂಜನೇಯ ಹೇಳಿದ ಶನಿ ದೇವ ನನ್ನ ತಂಟೆಗೆ ಬರಬೇಡ. ನಾನು ನನ್ನ ಪ್ರಭುವಿನ ಧ್ಯಾನ ಮಾಡುತ್ತಿರುವೆ. ನನ್ನ ಪ್ರಭುವಿನ ಧ್ಯಾನಕ್ಕೆ ತೊಂದರೆ ಮಾಡಬೇಡ ಎಂದು ವಿನಯದಿಂದ ಕೇಳಿದ. ಆದರೆ ಮಂಡು ಬಿದ್ದ ಶನಿ, ವಾನರ ನಿನಗೆ ಹೀಗೆಲ್ಲಾ ಹೇಳಿದರೆ ಅರ್ಥ ಆಗಲ್ಲ ನಿನ್ನ ಹೆಗಲಿಗೆ ಏರುತ್ತೇನೆ ಎಂದು ಅವನು ಒಂದು ಹೆಗಲನ್ನು ಹಿಡಿದು ಹನುಮನನ್ನು ತನ್ನೆಡೆಗೆ ತಿರುಗಿಸಲು ನೋಡಿದ. ಹನುಮನಿಗೆ ಆ ಕ್ಷಣ ನಿಗಿ ನಿಗಿ ಉರಿಯುವ ಕೆಂಡದ ಮೇಲೆ ನಿಂತಂತಾಯಿತು ಅವನು ತನ್ನ ಭುಜವನ್ನು ಒಮ್ಮೆಲೆ ಕೊಡ್ಹವಿ ಶನಿಯಿಂದ ಬಿಡಿಸಿಕೊಂಡ. ಹಠವಾದಿ ಶನಿಗೆ ಕೋಪ ಬಂದು ಕರಾಳ ರೂಪವನ್ನು ತಾಳಿ ಆಂಜನೇಯನ ಇನ್ನೊಂದು ಭುಜದ ಮೇಲೇರಿದ. ಹನುಮಂತಗೂ ಕೋಪ ಬಂದು ಬಾಲದಿಂದ ಶನಿಯನ್ನು ಸುತ್ತಿದ. ಆದರೂ ಶನಿಯ ಅಹಂಕಾರ ಕಡಿಮೆಯಾಗಲಿಲ್ಲ. ಜೋರಾಗಿ ನಕ್ಕು, ವಾನರ ನನ್ನನ್ನು ಏನು ಮಾಡಲು ಆಗುವುದಿಲ್ಲ ನೀನಿರಲಿ ನಿನ್ನ ಪ್ರಭು ರಾಮನು ಏನು ಮಾಡಲಾರ ಎಂದ. ತನ್ನ ಪ್ರಭುವನ್ನೇ ಗೇಲಿ ಮಾಡಿದ ಶನಿಯ ಮೇಲಿನ ಕೋಪ ಭುಗಿಲೆದ್ದಿತು. ಅಬ್ಬರಿಸಿದ ಏನಂದೇ, ನನ್ನ ಪ್ರಭುವಿಗೆ ಸವಾಲು ಹಾಕುವೆಯಾ? ಎಂದ ಆಂಜನೇಯ ತನ್ನ ಬಾಲದಿಂದ ಶನಿಯನ್ನು ಮತ್ತಷ್ಟು ಬಿಗಿಗೊಳಿಸಿ ಸುತ್ತಿ ಮೇಲೆ ಎತ್ತಿದ ಬಾಲದಲ್ಲಿದ್ದ ಶನಿಯನ್ನು ಬಂಡೆಗಳ ಮೇಲೆ ಹಾಕಿ ಅಪ್ಪಳಿಸಿದ. ಪರ್ವತಗಳ ಮೇಲೆ ಹಾಕಿ ಚಚ್ಚಿದ, ಗಿರ ಗಿರ ಗಿರ ತಿರುಗಿಸಿ ಭೂಮಿಯ ಮೇಲೆ ಕುಕ್ಕಿದ. ಶನಿಗೆ ಜೀವವೇ ಬಾಯಿಗೆ ಬಂದಂತಾಯಿತು. ಎಷ್ಟು ಬೇಡಿದರೂ ಆಂಜನೇಯ ಕೇಳುವ ಸ್ಥಿತಿ ಇರಲಿಲ್ಲ. ನನ್ನನ್ನು ಕಾಪಾಡಿ ಎಂದು ದೇವತೆಗಳಿಗೆ ಮೊರೆಯಿಟ್ಟ. ಆದರೆ ದೇವತೆಗಳು ಸಹಾಯಕ್ಕೆ ಬರಲಿಲ್ಲ. ಶನಿಗೆ ತನ್ನ ತಪ್ಪಿನ ಅರಿವಾಯಿತು. ಸೋತು ಬಸವಳಿದ ಶನಿ ಹನುಮನಲ್ಲಿ ಕ್ಷಮೆಯಾಚಿಸಿ, ನನ್ನದು ಅಪರಾಧ ಆಯಿತು. ಇನ್ನೆಂದು ನಿನ್ನ ತಂಟೆಗೆ ಬರುವುದಿಲ್ಲ ನಿನ್ನ ನೆರಳಿನಿಂದಲೇ ದೂರ ಹೋಗುವೆ ನನ್ನ ಉದ್ದಟತನವನ್ನು ಕ್ಷಮಿಸು ಎಂದು ಶನಿ ಅಂಗಲಾಚಿದ. ಸ್ವಲ್ಪ ಕೋಪ ತಗ್ಗಿದ ಆಂಜನೇಯ ಹೇಳಿದ, ಶನಿದೇವ ಕೇವಲ ನನ್ನ ನೆರಳಿನಿಂದ ಮಾತ್ರ ದೂರ ಹೋಗುವುದಲ್ಲ, ನನ್ನ ಭಕ್ತರ ನೆರಳಿನಿಂದಲೂ ದೂರ ಇರುತ್ತೇನೆ ಎಂದು ವಚನ ಕೊಡು ಎಂದನು. ಶನಿ ಹಾಗೆಯೇ ಆಗಲಿ ಎಂದು, ಇನ್ನೆಂದು ನಿನ್ನ ಭಕ್ತರ ಮೇಲೆ ನನ್ನ ವಕ್ರದೃಷ್ಟಿ ಬೀರುವುದಿಲ್ಲ, ಹಾಗೆ ಅವರ ನೆರಳಿನ ಹತ್ತಿರವು ಸುಳಿಯುವುದಿಲ್ಲ ಎಂದು ವಚನ ಕೊಟ್ಟನು. ನಂತರ ಹನುಮಂತನು ತನ್ನ ಬಾಲದ ಹಿಡಿತದಲ್ಲಿದ್ದ ಶನಿಯನ್ನು ಬಿಡುಗಡೆ ಮಾಡಿದನು. ಶನಿಯ ದೇಹ ನಜ್ಜು ಗುಜ್ಜಾಗಿ ನೋವಿನಿಂದ ನರಳಿ ಕಿರುಚಾಡುತ್ತಿದ್ದ. ಆಂಜನೇಯನಿಗೆ ಪಾಪ ಅನಿಸಿ ಎಳ್ಳೆಣ್ಣೆ ಯನ್ನು ಶನಿದೇವನ ಅಂಗಾಲಿಗೆ ತಾನೇ ತಿಕ್ಕಿದ. ಇದರಿಂದ ಶನಿದೇವನ ಮೈ ಕೈ ನೋವು ಕಡಿಮೆಯಾಗಿ ಶನಿಯ ಅಹಂಕಾರದ ಮನಸ್ಸು ಬದಲಾಯಿತು. ಇದಕ್ಕಾಗಿ ಶನಿದೇವನಿಗೆ ಎಳ್ಳೆಣ್ಣೆ ಹಚ್ಚುವ ಕ್ರಮ ಇದೆ. ಎಳ್ಳೆಣ್ಣೆಯಲ್ಲಿ ನೆನೆಸಿದ ಎಳ್ಳುತುಂಬಿದ ಪುಟ್ಟ ಬಟ್ಟೆ ಗಂಟಿಗೆ ದೀಪ ಹಚ್ಚುವುದರಿಂದ ಶನಿದೇವ ತೃಪ್ತನಾಗಿ ಭಕ್ತರ ಕಷ್ಟ ಪರಿಹರಿಸುತ್ತಾನೆ. ಶನಿ ಆಂಜನೇಯನಿಗೆ ಕೊಟ್ಟ ಮಾತಿನಂತೆ, ಆಂಜನೇಯನ ಭಕ್ತರ ಮೇಲೆ ತನ್ನ ವಕ್ರದೃಷ್ಟಿಯನ್ನು ಬೀರುವುದಿಲ್ಲ. ಅವರ ನೆರಳ ಹತ್ತಿರವೂ ಸುಳಿಯುವುದಿಲ್ಲ. ಆಂಜನೇಯನ ಪೂಜೆ ಮಾಡಿದರೆ ಶನಿ ಕಾಟದ ಭಯವಿಲ್ಲ. ಆಂಜನೇಯ ದ್ವಾದಶನಾಮಸ್ತೋತ್ರಮ್ || ಶ್ರೀ ಆಂಜನೇಯ ದ್ವಾದಶನಾಮಸ್ತೋತ್ರಮ್ || ಹನುಮಾನಂಜನಾಸೂನುಃ ವಾಯುಪುತ್ರೋ ಮಹಾಬಲಃ | ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಟೋ$ಮಿತವಿಕ್ರಮಃ ||೧|| ಉದಧಿಕ್ರಮಣವ ಸೀತಾಶೋಕವಿನಾಶಕಃ ಲಕ್ಷ್ಮಣ ಪ್ರಾಣದಾತಾಚ ದಶಗ್ರೀವಸ್ಯ ದರ್ಪಹಾ !!೨!! ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ | ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತ ! ತಸ್ಯಮೃತ್ಯು ಭಯಂನಾಸ್ತಿ ಸರ್ವತ್ರ ವಿಜಯೀ ಭವೇತ್ ||೩|| ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ.

Comments