
iLesa - The Music Channel
June 8, 2025 at 06:31 AM
*ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ಧಿಕ್ಕಾರ!.*
==================================
ಕವಿ (Poet) ಮನಸ್ಸೇ ಹಾಗೆ . ಅದು ಭವ್ಯ ದಿಗಂತದಲ್ಲಿ ಉದ್ದುದ್ದ , ಮಿತಿಯ ಎಲ್ಲೆಯ ಮೀರಿ ದೂರ ದೂರ ರೆಕ್ಕೆ ಬಿಚ್ಚಿ ಹಾರುವ ಹಕ್ಕಿ. ಸೀಮಿತ ಚೌಕಟ್ಟಿನಲ್ಲಿ , ಸನ್ನಿವೇಶದ ಸಂದರ್ಭಕ್ಕೆ ಹಾಡೆಂದರೆ ಕವಿ ಕೋಗಿಲೆಯದು ಮೌನಾಲಾಪ !.
ಈ *Blank Space* ತುಂಬಿಕೊಳ್ಳಲು ಯಶಶ್ವಿಯಾದವರೇ ಗೀತೆ ರಚನೆಕಾರರು (Lyricists).
ಕನ್ನಡ ಚಿತ್ರ ಇತಿಹಾಸದಲ್ಲಿ ಸಿನಿಮಾಕ್ಕೋಸ್ಕರ ಗೀತೆ ಬರೆಯಲು ಮನಸ್ಸು ಮಾಡಿದ ಕವಿಗಳು ತೀರಾ ವಿರಳ. ಪ್ರಯತ್ನಿಸಿದರೂ ದೊಡ್ಡರಂಗೆ ಗೌಡರು ಮತ್ತು MN ವ್ಯಾಸರಾಯರಂತೆ ಹೆಸರಾದವರು ಇಲ್ಲವೇ ಇಲ್ಲ ಎನ್ನುವಷ್ಟು ಬೆರಳೆಣಿಕೆಯವರು. ಕೆಲವರು ಬೆರಳಾಡಿಸಿ ಇದು *Not my cup of tea or coffee* ಎಂದು ಕೊಟ್ಟ ಟೀ -ಕಾಫಿ ಯನ್ನೂ ತಣ್ಣಗಾಗಲು ಬಿಟ್ಟು ಕುಡಿಯದೆ ಕೈ ತೊಳೆದು ಕೊಂಡಿದ್ದಾರೆ! .
ಉಳಿದಂತೆ ಕವಿಗಳಿಂದ ಹಾಡು ಬರೆಸುವುದಕ್ಕಿಂತ ಕವಿಗಳ ರಚನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಅಳವಡಿಸಿಕೊಂಡ ನಿರ್ದೇಶಕರೆ ಹೆಚ್ಚು.
ಮರಳಿ ಗೂಡಿಗೆ ಸಿನಿಮಾದ ಪ್ರಸಿದ್ಧ ಹಾಡು ''ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲಾ!'' ಎನ್ನುವುದು ನಿತ್ಯೋತ್ಸವದ ಕವಿ ನಿಸಾರ್ ಅಹಮದರ ರಚನೆಯೆನ್ನುವುದು ಇಂದಿಗೂ ಹಲವರಿಗೆ ನಿಗೂಢ. ಕೆಲವಾರು ಖ್ಯಾತ ಹಾಡುಗಳ ಸಾಹಿತ್ಯ ಸಾಹಿತಿಯ ಹೆಸರಿಲ್ಲದೆ ಸಾಯುವುದು ಹೀಗೆ .
ಕವಿಗಳ ಹಾಡುಗಳನ್ನು ಚಿತ್ರಗೀತೆಯಾಗಿ ಬಳಸಿಕೊಂಡವರ ಪಟ್ಟಿಯಲ್ಲಿ ಪುಟ್ಟಣ್ಣ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. *ಪಡುವರ ಹಳ್ಳಿ ಪಾಂಡವರು*ಕಥೆ ಅಥವಾ ಕಾದಂಬರಿ ಆಧರಿಸಿ ಸಿನಿಮಾ ಆದದ್ದಲ್ಲ ದೊಡ್ಡ ರಂಗೆ ಗೌಡರ ''ಧಣಿ ಪುರಾಣ'' ಎಂಬ ಪ್ರಗಾಥ ವನ್ನು (ನೀಳ್ಗವಿತೆ ) ಪುಟ್ಟಣ್ಣ ಚಿತ್ರ ಕಥೆಯಾಗಿ ಬದಲಾಯಿಸಿದ ಮೇಲೆ ಪಡುವರಹಳ್ಳಿಯ ಪಾಂಡವರ ಜನನವಾದದ್ದು.
''ಜನ್ಮನೀಡಿದ ಭೂ ತಾಯಿಯ ನಾ ಹ್ಯಾಗೆ ತಾನೇ ಮರೆಯಲಿ?'' ''ಏಸು ವರ್ಷ ಐತೆ ನಿಂಗೆ ನನ್ನ ಬಂಗಾರಿ'' , ''ಶ್ರೀ ರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ'' ಇಂತಹ ಅಪ್ಪಟ ಹಳ್ಳಿ ಸೊಗಡಿನ ಹಾಡಿನ ಮೂಲಕ A New lyricist is Born i say ಎಂದು ಪುಟ್ಟಣ್ಣನವರಿಂದ ಬೆನ್ನು ತಟ್ಟಿಸಿಕೊಂಡು ದಿನ ಬೆಳಗಾಗುವುದರೊಳಗೆ ಕನ್ನಡದ ಚಿತ್ರ ಗೀತೆ ರಚನೆಕಾರರಾಗಿ ಹೊಸ ರೇಂಜ್ ಗೆ ಹೆಸರಾದವರು ದೊಡ್ಡ ರಂಗೆ ಗೌಡರು.
ಅದೇ ಚಿತ್ರದಲ್ಲಿ ಈ ತಲೆದೂಗುವ ಹಾಡುಗಳ ನಡುವೆಯೇ ಕರ್ನಾಟಕದ ಅದರಲ್ಲೂ ''ತುಳುನಾಡಿನ'' ಗಡು ಕಾಸರಗೋಡು ಏಕೀಕರಣದ ಕನಸು ಕಂಡ ಒಬ್ಬವಿಶೇಷ ಕವಿಯ ಎರಡು ಹಾಡುಗಳು ಪಡುವರ ಹಳ್ಳಿ ಪಾಂಡವ ಯುವಕರ ನಡುವೆ ಹೋರಾಟದ ಮತ್ತು ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಹಳ್ಳಿಯ ಪಟೇಲನ ವಿರುದ್ಧ ಸಿಡಿದೆದ್ದು ಹೋರಾಡಿದ್ದ ಹಾಡು ಅಷ್ಟಾಗಿ ಸುದ್ದಿಯಾಗಲೇ ಇಲ್ಲ !.
ಯಾರೋ ಬಯಲು ಸೀಮೆಯ ಕವಿ ಬರೆದಿರಬಹುದು ''ನಂಜನ ಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ '' ಎಂದು ಇತ್ತೀಚಿನವರೆಗೆ ನಂಬಿ ಹಾಡಿಕೊಂಡು ಬಂದಿದ್ದ ನಮಗೆ ಸ್ವಾತಂತ್ರ್ಯಕ್ಕೂ ಮೊದಲೇ ಕೆಚ್ಚಿನ ಹಾಡುಗಳನ್ನು ಬರೆದು ಹೆಸರಾದ ಕೈಯ್ಯಾರರು ಪಡುವರ ಹಳ್ಳಿ ಪಾಂಡವರು ಚಿತ್ರದ ಸಂಗೀತ ಮಾಂತ್ರಿಕ ವಿಜಯ ಭಾಸ್ಕರರ ಜೊತೆ ಕುಳಿತು ಎರಡು ಹಾಡುಗಳನ್ನು ಸಂಯೋಜಿಸಲು ಕೈಜೋಡಿಸಿದ್ದು ಮತ್ತೊಂದು ಸೋಜಿಗವೆ.
ಇತ್ತೀಚೆಗೆ ದೊಡ್ಡ ರಂಗೇಗೌಡರ ''ಸನ್ನಿಧಿ'' ಯಲ್ಲಿ ಈ ವಿಷಯ ಸ್ಪಷ್ಟ ಪಡಿಸಿಕೊಂಡು ಅವರ ಎರಡು ಹಾಡುಗಳು ''ಹಾಡೊಮ್ಮೆ ಹಾಡಬೇಕು ಎಲ್ಲರೊಂದೇ ಎನ್ನುವ ಹಾಡೊಮ್ಮೆ ಹಾಡಬೇಕು'' ಮತ್ತು ''ಬಹಿಷ್ಕಾರ ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ಧಿಕ್ಕಾರ!'' ಎನ್ನುವ ಈ ಎರಡು ಹಾಡುಗಳನ್ನು ನಿಮ್ಮ ಕೇಳುವಿಕೆಗೆ ಇಲ್ಲಿ ಪ್ರಕಟಿಸಿದ್ದೇನೆ .
ಐಲೇಸಾದ ಹಿತೈಷಿ ಛಾಯಾಗ್ರಾಹಕ , ನಿರ್ದೇಶಕ ಮೋಹನ್ ಪುಟ್ಟಣ್ಣ ಕೈಯಾರರು ಮತ್ತು ವಿಜಯಭಾಸ್ಕರ್ ಹಾಡು ಸಂಯೋಜಿಸುವ ಅತ್ಯಂತ ಅಪರೂಪ ಎನ್ನುವಂತಹ ಚಿತ್ರವೊಂದನ್ನು ಕೂಡಾ ಕಳಿಸಿ ಕೊಟ್ಟಿದ್ದಾರೆ .
ಸ್ವತಂತ್ರ ಭಾರತದ '' ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ'' ಎಂದು ನಮ್ಮ ಬಾಲ್ಯದಲ್ಲಿಯೇ ಭಾರತದ ಬಾವುಟದ ಬಗ್ಗೆ ಸುಂದರ ಚಿತ್ರ ಮನಸ್ಸಲ್ಲಿ ಕೊರೆದಿಟ್ಟ ಅಜ್ಜ ಕೈಯ್ಯಾರರ ಬಗ್ಗೆ ಅಭಿಮಾನ ಇರುವವರು ಅವರ ವಿಷಯ ಸಂಗ್ರಹದಲ್ಲಿ ಈ ಹೊಸ ವಿಚಾರವನ್ನೂ ನೆನೆಪಿಟ್ಟುಕೊಂಡು ನವ ಪೀಳಿಗೆಗೆ ಹಂಚುವುದು ಒಳಿತೆನ್ನುತ್ತದೆ ಒಳ ಮನಸ್ಸು!.
ಅಂತೂ ಕೈಯಾರರು ಸಿನಿಮಾ ಲೋಕದಲ್ಲೂ ಕೈಯಾಡಿಸಿದ್ದಾರೆ !.
https://www.youtube.com/watch?v=6u69s0JOx4s
--ಶಾಂತಾರಾಮ್ ಶೆಟ್ಟಿ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ).
(ಇಂದು ಕೈಯಾರರ ಹುಟ್ಟುದಿನ. ಅವರ ನೆನಪಿನಲ್ಲಿ ಈ ಲೇಖನ.)