ದಿನಕ್ಕೊಂದು ಪೌರಾಣಿಕ ಕಥೆ 𝗙𝗼𝗹𝗹𝗼𝘄
February 7, 2025 at 02:47 PM
ಚಾಮುಂಡೇಶ್ವರಿ ವರ್ಧಂತಿಯ ವಿಶೇಷ ಬೆಟ್ಟದಲ್ಲಿ ಚಾಮುಂಡೇಶ್ವರಿ ನೆಲೆಸಿದ ಕಥೆ ಚಾಮುಂಡಿ ಬೆಟ್ಟವು ಮೈಸೂರಿನ ಪೂರ್ವ ಭಾಗದಲ್ಲಿದ್ದು . ಸಾವಿರಾರು ವರ್ಷಗಳ ಹಿಂದೆ ಮಹಿಷಾಸುರ ಎಂಬ ರಾಕ್ಷಸ ದೇವಲೋಕ ಹಾಗೂ ಭೂಲೋಕದಲ್ಲಿ ಎಲ್ಲರಿಗೂ ಸಮಸ್ಯೆ ಉಂಟು ಮಾಡುತ್ತಿದ್ದ. ನನ್ನ ರಕ್ತ ನೆಲದ ಮೇಲೆ ಬಿದ್ದರೆ ನನ್ನಂಥ ನೂರು ರಾಕ್ಷಸರು ಹುಟ್ಟಬೇಕು ಎಂದು ತಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆದಿರುತ್ತಾನೆ. ಆತನನ್ನು ಹೇಗಾದರೂ ಸಂಹಾರ ಮಾಡಬೇಕೆಂದು ದೇವತೆಗಳು ಬ್ರಹ್ಮ, ವಿಷ್ಣು, ಶಿವನ ಮೊರೆ ಹೋದರು. ಆಗ ತ್ರಿಮೂರ್ತಿಗಳು ತಾಯಿ ಪಾರ್ವತಿಗೆ ಹೆಚ್ಚಿನ ಶಕ್ತಿ ನೀಡುತ್ತಾರೆ. ಪ್ರತಿ ಮೆಟ್ಟಿಲಿಗೂ ಪೂಜೆ ಮಾಡುವ ಭಕ್ತರು ಚಾಮುಂಡೇಶ್ವರಿಯು ಪಾರ್ವತಿಯ ಪ್ರತಿರೂಪ. ಬೆಟ್ಟದಲ್ಲಿ ಮಹಿಷಾಸುರನೊಂದಿಗೆ ಹೋರಾಡಿ ಆತನನ್ನು ಸಂಹರಿಸಿ ಜನರನ್ನು , ದೇವತೆಗಳನ್ನು ಕಾಪಾಡುತ್ತಾಳೆ. ಮಹಿಷಾಸುರನ ರಕ್ತ ನೆಲದ ಮೇಲೆ ಬೀಳದಂತೆ ಚಾಮುಂಡೇಶ್ವರಿಯ ಸಹೋದರಿ ಜ್ವಾಲಾಮುಖಿ ತ್ರಿಪುರ ಸುಂದರಿ ತನ್ನ ನಾಲಿಗೆ ಚಾಚುತ್ತಾಳೆ. ಮಹಿಷಾಸುರನನ್ನು ಕೊಂದಿದ್ದಕ್ಕೆ ಚಾಮುಂಡಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿದ್ದಾಗಿ ಕಥೆ ಇದೆ. ಈಗಲೂ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದ ಎದುರು ಮಹಿಷಾಸುರನ ಮೂರ್ತಿ ಇದೆ. ಹಾಗೇ ಬೆಟ್ಟದ ಸ್ವಲ್ಪ ದೂರದಲ್ಲಿ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಇದೆ. ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ. ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ. ಪುರಾಣವೊಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ. ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿ ಕೊಳ್ಳಲು, ನಂಜನಗೂಡಿನ ಕಪಿಲಾ ನದಿ ತಟಕ್ಕೆ ಬಂದು, ಮಧ್ಯರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವನಂಜುಂಡೇಶ್ವರ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ. ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಚಾಮುಂಡಿ-ಗೌರಿಯರ ಜಗಳ ಜನಪದ ಸಾಹಿತ್ಯದಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ. ಇದರಿಂದ ಕಂಗಾಲಾದಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿಕೊಳ್ಳಲು ಬಿರ ಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಇವಳನ್ನು ಸಿಂಹವಾಹಿನಿಯೆಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಜನಪದ ಕಥೆಯ ಪ್ರಕಾರ ಚಾಮುಂಡಿ ಉಜ್ಜಯಿನಿ ದೇಶದ ಬಿಜ್ಜಳರಾಯನ ಕಿರಿಯ ಮಗಳು. ಚಾಮುಂಡಿಯ ಅಕ್ಕ ಉರಿಮಸಣಿ ಸೇರಿದಂತೆ ಒಟ್ಟು ಏಳುಜನ ಅಕ್ಕ-ತಂಗಿಯರು. ಇವರು ಕಾರಣಾಂತರಗಳಿಂದ ಪರಸ್ಪರ ಜಗಳ ಕಾದು, ಮನೆಬಿಟ್ಟು ಪರಿತ್ಯಕ್ತೆಯರಾಗುತ್ತಾರೆ. ಇವರೆಲ್ಲ ಉತ್ತರ ಪ್ರದೇಶದಿಂದ ಹೊರಟು, ದಕ್ಷಿಣ ಪ್ರಾಂತ್ಯದ ಭಿನ್ನ ಭಿನ್ನ ಸ್ಥಳಗಳಲ್ಲಿ ನೆಲೆ ಕಂಡು ಕೊಳ್ಳುತ್ತಾರೆ. ಚಾಮುಂಡಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ಪಾಠಾಂತರಗಳು ಇರುವುದನ್ನು ಕಾಣಬಹುದಾಗಿದೆ. ಮತ್ತೊಂದು ಕಥೆಯ ಪ್ರಕಾರ ಚಾಮುಂಡಿ ಚಾಮರಾಯನ ಮಗಳು. ಈಕೆಗೆ ಕಿಚುಕುಚು ಮಾರಿ ಎಂಬ ಸೋದರಿ, ಮಹದೇಶ್ವರ ಮತ್ತು ಬ್ರಹ್ಮೇಶ್ವರ ಎಂಬ ಸೋದರರಿರುತ್ತಾರೆ. ಅನ್ಯ ಕಾರಣ ನಿಮಿತ್ತ ಈ ನಾಲ್ವರು ಮನೆ ಬಿಟ್ಟು ಹೊರಬರುವಾಗ, ಮಾರ್ಟಳ್ಳಿಯ ಹತ್ತಿರವಿರುವ ಸುಳ್ವಾಡಿ ಎಂಬ ಊರಲ್ಲಿ ಲಂಬಾಣಿ ಜನಾಂಗದವರು ಮಾಂಸದಡುಗೆ ಮಾಡುತ್ತಿರುವುದನ್ನು ಕಂಡ ಕಿಚುಕುಚು ಮಾರಿಯ ಬಾಯಲ್ಲಿ ನೀರೂರಿ ಬಿಡುತ್ತದೆ. ಆಗ ಆಕೆ ತನ್ನ ಅಕ್ಕ ಮತ್ತು ಅಣ್ಣಂದಿರಿಗೆ ತಾನಿಲ್ಲೆ ಉಳಿಯುವುದಾಗಿ ಹೇಳುತ್ತಾಳೆ. ಅದಕ್ಕವರು ಸಮ್ಮತಿಸುತ್ತಾರೆ. ಸುಮಾರು ಒಂದು ಮೈಲಿ ದೂರ ಬಂದಾಗ ಮಹದೇಶ್ವರ, ತಮ್ಮನಾದ ಬ್ರಹ್ಮೇಶ್ವರನಿಗೆ ನೀನು ತಂಗಿಯ ರಕ್ಷಣೆಗಾಗಿ ಇಲ್ಲೇ ಉಳಿವಂತೆ ಆದೇಶಿಸುತ್ತಾನೆ. ನಂತರ ತಾನು ಮಹದೇಶ್ವರ ಬೆಟ್ಟದೆಡೆಗೆ ಸಾಗಿ ಏಳುಮಲೆಯಲ್ಲಿ ನೆಲೆಸುತ್ತಾನೆ. ಚಾಮುಂಡಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರಕ್ಷಣಾ ದೇವತೆಯಾಗಿ ನೆಲೆ ನಿಲ್ಲುತ್ತಾಳೆ. ಪುರಾಣಗಳು ಜಾನಪದ ಏನೇ ಹೇಳಿದರೂ ಚಾಮುಂಡಿ ದೇವಿ ನಮ್ಮೆಲ್ಲರ ನಾಡ ದೇವತೆಯಾಗಿ ನಮ್ಮ ರಕ್ಷಣೆಗಾಗಿ ನಿಂತಿದ್ದಾಳೆ. ಹಾಗಾಗಿ ಈಕೆಯ ವರ್ಧಂತಿಯ ಪ್ರಯುಕ್ತ ದೇವಿಯ ಬಳಿ ನಮ್ಮನ್ನು ಕಾಪಾಡು ತಾಯಿ ಎಂದು ಕೇಳುತ್ತಾ ಆಕೆಯನ್ನ ನಮಿಸೋಣ ವಂದನೆಗಳೊಂದಿಗೆ ಸೌಮ್ಯ ಕೋಠಿ ಮೈಸೂರು
🙏 ❤️ 👍 😢 17

Comments