ಸನಾತನ ಹಿಂದೂ ಧರ್ಮ🚩
March 1, 2025 at 07:48 AM
*ಇಂದು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 404 ನೇ ಪಟ್ಟಾಭಿಷೇಕದ ದಿನ* ದುರ್ವಾದಿಧ್ವಾಂತ ರವಯೇ ವೈಷ್ಣವೇಂದಿ ವರೇಂದವೇ | ಶ್ರೀರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳುವೇ || ಶ್ರಿ ರಾಘವೇಂದ್ರ ಗುರು ಸಾರ್ವಭೌಮರ ಪೂರ್ವಾಶ್ರಮದ ಹೆಸರು ಶ್ರೀವೆಂಕಟನಾಥಾಚಾರ್ಯ. ಇವರು ತಮ್ನ ಧರ್ಮಪತ್ನಿ ಸಾದ್ವಿ ಶ್ರೀಮತಿ ಸರಸ್ವತಿಬಾಯಿಯವರ ಜತೆ, ಸಾಕಷ್ಟು ಸಂಸಾರದ ತಾಪತ್ರಯಗಳ ಮಧ್ಯೆ ಉತ್ತಮ ಸದ್ಗೃಹಸ್ಥರಾಗಿ ಸಾತ್ವಿಕ ಜೀವನ ನಡೆಸುತ್ತಿದ್ದರು. ಇಂತಹ ವ್ಯಕ್ತಿ ಶ್ರೀಮೂಲರಾಮದೇವರ ಸೇವೆಗಾಗಿಯೇ, ಸನ್ಯಾಸಾಶ್ರಮ ಸ್ವೀಕರಿಸಿ *ಶ್ರೀರಾಘವೇಂದ್ರತೀರ್ಥ* ರೆಂಬ ಹೆಸರಿನಿಂದ ಹಂಸನಾಮಕ ಪರಮಾತ್ಮನ ಪರಂಪರೆಯ ದ್ವೈತ ಸಾಮ್ರಾಜ್ಯದ ಸಿಂಹಾಸನವೇರಿದ ದಿನ. ಸನ್ಯಾಸಿಯಾಗಿ ನರಸಿಂಹದೇವರ ಕರುಣೆಯಿಂದ ಅಗಾಧ ತಪಶ್ಯಕ್ತಿ ಪಡೆದು, ಜಗತ್ತಿನ ಕುಲಕೋಟಿಯನ್ನು ಉದ್ಧರಿಸುತ್ತಿರುವ ಮಹಾನುಭಾವರಾದ *ಶ್ರೀರಾಯ* ರನ್ನು ಈ ದಿನ ಸ್ಮರಿಸೋಣ....🙏🙏🙏. ತಮಿಳುನಾಡಿನ *ಭುವನಗಿರಿ* ಯಲ್ಲಿ ವಾಸವಿದ್ದ *ಶ್ರೀತಿಮ್ಮಣ್ಣ ಭಟ್ಟರು ಹಾಗೂ ಸಾಧ್ವಿ ಶ್ರೀಮತಿ ಗೋಪಿಕಾಂಬ* ಎಂಬ ದಂಪತಿಗೆ 1595ರಲ್ಲಿ ಸುಂದರ ಗಂಡು ಮಗ ಜನಿಸಿತು. ಈ ಮಗುವಿಗೆ *ವೆಂಕಣ್ಣಭಟ್ಟ(ವೆಂಕಟನಾಥ)* ಎಂದು ಹೆಸರಿಡಲಾಯಿತು. ಬಾಲ್ಯದಲ್ಲಿಯೇ ಸಾಕಷ್ಟು ತೀಕ್ಷ್ಣಮತಿಯಾಗಿದ್ದ ವೆಂಕಟನಾಥರು ವಿದ್ಯಾರ್ಥಿಯಾಗಿದ್ದಾಗ ಎಲ್ಲ ವಿದ್ಯೆಗಳಲ್ಲಿ ಪ್ರಾವಿಣ್ಯತೆ ಗಳಿಸಿದರು.‌ ಅವರ ಸಹೋದರ ಶ್ರೀಗುರುರಾಜಾಚಾರ್ಯ ಹಾಗೂ ಭಾವ ಶ್ರೀನರಸಿಂಹಾಚಾರ್ಯರಲ್ಲಿ ಸಾಕಷ್ಟು ಅಧ್ಯಯನ ನಡೆಸಿದರು. ಸಕಲ ಶಾಸ್ತ್ರ ಕಲಿತು ವಯಸ್ಕನಾದ ವೆಂಕಣ್ಣನಿಗೆ ಸರಸ್ವತಿ ಎಂಬ ಕನ್ಯೆಯೊಡನೆ ವಿವಾಹ ನಡೆಸಲಾಯಿತು. ನಂತರ ನಡೆದದ್ದೆಲ್ಲಾ ಒಂದು ರೀತಿ ಪವಾಡವೇ. ಯುವಕ ವೆಂಕಣ್ಣ ಕುಂಭಕೋಣಂನಲ್ಲಿದ್ದ *ಶ್ರೀಸುಧೀಂದ್ರತೀರ್ಥ* ರಲ್ಲಿ ಆಶ್ರಯ ಪಡೆದರು. ಅಲ್ಲಿ ಇವರ ಗುರುಗಳಾದ 64 ವಿದ್ಯೆಗಳಲ್ಲಿ ಪ್ರವೀಣರಾದ *ಶ್ರೀವಿಜಯೀಂದ್ರತೀರ್ಥ* ರು ವೆಂಕಣ್ಣನ ಮೇಲೆ ಅಗಾಧವಾದ ಪ್ರಭಾವ ಬೀರಿದರು. ಅಧ್ಯಯನದ ಮೂಲಕ ಅವರಲ್ಲಿದ್ದ 64 ವಿದ್ಯೆಗಳನ್ನು ಕಲಿತ ವೆಂಕಣ್ಣ, ಉತ್ತಮೋತ್ತಮ ಪಂಡಿತರಾದರು. ಹೀಗೆ ಕಾಲ ಕಳೆದಂತೆ, ಮುಂದೆ ಯಾರಿಗೆ ಸಂಸ್ಥಾನ(ಪೀಠ) ನೀಡಬೇಕೆಂಬ ತವಕದಲ್ಲಿದ್ದ ಶ್ರೀಸುಧೀಂದ್ರತೀರ್ಥರಿಗೆ, ಶ್ರೀವೆಂಕಟನಾಥಾಚಾರ್ಯರಿಗೇ ಪೀಠ ನೀಡುವಂತೆ *ಶ್ರೀಮೂಲರಾಮ* ದೇವರ ಅನುಗ್ರಹವಾಯಿತು. ಇತ್ತ ವೆಂಕಟನಾಥಾಚಾರ್ಯರಿಗೂ ಸ್ವಪ್ನದಲ್ಲಿ *ವಾಗ್ದೇವಿ* ಕಾಣಿಸಿಕೊಂಡು ದ್ವೈತಮತ ವೇದಾಂತ ಸಾಮ್ರಾಜ್ಯ ಸಿಂಹಾಸನ ಏರುವಂತೆ ಸೂಚಿಸಿದಳು. ಇದರಿಂದ ಪ್ರೇರಿತರಾದ ವೆಂಕಟನಾಥಾಚಾರ್ಯರಿಗೆ ಕ್ರಿ.ಶ 1621ರ ಶ್ರೀದುರ್ಮತಿನಾಮ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆಯಂದು ತಮಿಳುನಾಡಿನ ತಂಜಾವೂರಿನಲ್ಲಿ *ಸನ್ಯಾಸಾಶ್ರಮ* ಸ್ವೀಕರಿಸಿದರು. ಗುರುಗಳಾದ ಶ್ರೀಸುಧೀಂದ್ರತೀರ್ಥರು ವೆಂಕಟನಾಥಾಚಾರ್ಯರಿಗೆ *ಶ್ರೀರಾಘವೇಂದ್ರತೀರ್ಥ* ಎಂಬ ಅಭಿದಾನ ನೀಡಿ ಅನುಗ್ರಹಿಸಿದರು. ತುರಿಯಾಶ್ರಮ(ಸನ್ಯಾಸ) ಸ್ವೀಕರಿಸಿದ ಶ್ರೀರಾಘವೇಂದ್ರತೀರ್ಥರು ಹಂಸನಾಮಕ ಪರಮಾತ್ಮನ ಪರಂಪರೆಯ ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಪರಂಪರೆಯಲ್ಲಿ 16ನೆಯ ಯತಿಗಳಾಗಿ ವಿರಾಜಮಾನರಾದರು. ಸಕಲ ಶಾಸ್ತ್ರ ಕೋವಿದರಾದ, 64 ವಿದ್ಯೆಗಳಲ್ಲಿ ಪ್ರವೀಣರಾದ, ದುರ್ಮತಿಗಳನ್ನು ವಾದದಲ್ಲಿ ತಮ್ಮ ಸಿಂಹಗರ್ಜನೆಯಿಂದ ಓಡಿಸಿದ್ದವರು ಮಹಾನುಭಾವರಾದ ಶ್ರೀವಿಜಯೀಂದ್ರತೀರ್ಥರು. ಇವರ ಪೂರ್ಣಾನುಗ್ರಹ ಪಡೆದಿದ್ದ ಧೀಮಂತ ಸನ್ಯಾಸಿ ಶ್ರೀಸುಧೀಂದ್ರತೀರ್ಥ ಶ್ರೀಪಾದರು, ಜಗತ್ತಿಗೆ *ಶ್ರೀರಾಘವೇಂದ್ರತೀರ್ಥ* ರೆಂಬ *ಅನರ್ಘ್ಯರತ್ನ* ವನ್ನು ಕೊಡುಗೆಯಾಗಿ ನೀಡಿದ ದಿನವಿದು. ಸಕಲ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ವೆಂಕಟನಾಥಾಚಾರ್ಯರು ವೇದಾಂತ ಸಾಮ್ರಾಜ್ಯದ ಸಿಂಹಾಸನದಲ್ಲಿ *ಶ್ರೀರಾಘವೇಂದ್ರತೀರ್ಥ* ರಾಗಿ, ಭಕ್ತರ ಮನೋಭಿಷ್ಟ ಕರುಣಿಸುವ *ಕಲ್ಪಧ್ರುಮ* ವಾಗಿ, ದೀನರ ಪಾಲಿಗೆ ಕಷ್ಟ ನಿವಾರಿಸಿ ಸುಖ ನೀಡುವ *ಕಾಮಧೇನು* ವಾಗಿ, ನೊಂದವರ ಪಾಲಿನ *ಕಲ್ಪವೃಕ್ಷ* ವಾಗಿ, ಕೋಟ್ಯಾನುಕೋಟಿ ಜನರ ಪಾಲಿಗೆ *ಶ್ರೀರಾಘವೇಂದ್ರ ಗುರು ಸಾರ್ವಭೌಮ* ರಾಗಿ, ಅನಾಥರ ಪಾಲಿಗೆ *ರಾಘವೇಂದ್ರಸ್ವಾಮಿ* ಗಳಾಗಿ ಇಂದಿಗೂ ಅನುಗ್ರಹಿಸುತ್ತಿರುವ ಮಹಾನುಭಾವರು. ವೈಕುಂಠದಲ್ಲಿ *ಶ್ರೀಹರಿಯ* ಸೇವಾ ಕಿಂಕರನಾದ *ಶಂಕುಕರ್ಣ* ನ ಅವತಾರ ಇವರು. ಮೊದಲನೇ ಅವತಾರದಲ್ಲಿ *ಪ್ರಹ್ಲಾದರಾಜ* ರಾಗಿ, ಎರಡನೇ ಅವತಾರದಲ್ಲಿ *ಬಾಹ್ಲಿಕರಾಜ* ನಾಗಿ, ಮೂರನೇ ಅವತಾರದಲ್ಲಿ *ಶ್ರೀವ್ಯಾಸರಾಜ* ರಾಗಿ ಅವತರಿಸಿದ ಶಂಕುಕರ್ಣ, ಜಗತ್ತಿನ ದೀನರನ್ನು ಉದ್ಧರಿಸಲು *ಶ್ರೀರಾಘವೇಂದ್ರಸ್ವಾಮಿ* ಗಳಾಗಿ ಅವತರಿಸಿದ ದಿನವಿದು. ಭಕ್ತರ ಪಾಲಿಗೆ *ರಾಯರು* ಆಗಿರುವ ಶ್ರೀರಾಘವೇಂದ್ರಗುರುಸಾರ್ವಭೌಮರನ್ನು *ಅನುದಿನ ನಮಿಸೋಣ, ಅನುಕ್ಷಣ ಸ್ಮರಿಸೋಣ.* *ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ|* *ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||* *ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ |* *ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ||* *ಓಂ ಶ್ರೀರಾಘವೇಂದ್ರಾಯ ನಮಃ*....🙏🙏🙏 ಧರ್ಮಾಧಾರಿತ ಮಾಹಿತಿಗಾಗಿ: Follow...ಸನಾತನ ಹಿಂದೂ ಧರ್ಮ https://whatsapp.com/channel/0029Va9eH0M3bbUz1vZGVU0V *ಗಮನಿಸಿ:* ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಾಲೂ ವಾಟ್ಸಾಪ್ UPDATE ವಿಭಾಗದಲ್ಲಿ ಚಾನೆಲ್ ಲಭ್ಯವಿರುತ್ತದೆ. _ಹಿಂದೂ ಬಾಂಧವರಿಗೆಲ್ಲಾ ಶೇರ್ ಮಾಡಿರಿ._
🙏 5

Comments