
ಗುರುಪ್ರಸಾದ್ ಆಚಾರ್ಯ ಕುಂಜೂರು
February 4, 2025 at 11:09 AM
#ಅಂತರಾಳದಿಂದ
ಮಹಾಭಾರತ ಯುದ್ಧ ನಡೆದ ಬಳಿಕ ಶರಶಯ್ಯೆಯಲ್ಲಿದ್ದ ಭೀಷ್ಮ ಧರ್ಮರಾಯನಿಗೆ ರಾಜನೀತಿ ಬೋಧನೆ ಮಾಡುತ್ತಾನೆ... ಅದರಲ್ಲೊಂದು ಅಂಶ ಈ ಕೆಳಗಿನಂತಿದೆ..
" ರಾಜನಾದವನು ತೆರಿಗೆದಾರರಿಗೆ ಸ್ವಲ್ಪವೂ ತೊಂದರೆಯಾಗದಂತೆ, ಹೂವಿನಿಂದ ದುಂಬಿಯು ಮಧುವನ್ನು ಹೀರುವಂತೆ ಅರ್ಥಾತ್ ಹೂವಿನ ಮೇಲೆ ದುಂಬಿಯು ಕುಳಿತು ಮಧುವನ್ನು ಹೀರಿಕೊಂಡರೂ ಹೇಗೆ ಹೂವು ಬಾಡುವುದಿಲ್ಲವೋ. ಸುವಾಸನೆಯನ್ನೂ ಕಳೆದುಕೊಳ್ಳುವುದಿಲ್ಲವೋ ಅದೇ ರೀತಿ ರಾಜನು ಜನರಿಂದ ತೆರಿಗೆಯನ್ನು ಉಪಾಯದಿಂದ ತೆಗೆದುಕೊಳ್ಳಬೇಕು. ಜನರಿಗೆ ಅಪ್ರಿಯವಾಗುವ ರೀತಿಯಲ್ಲಿ ತೆರಿಗೆಯನ್ನು ತೆಗೆದುಕೊಳ್ಳಬಾರದು. "
ಬಹುಶಃ ಈ ಸಾಲುಗಳನ್ನ ಓದಿದೊಡನೆ ಅನೇಕ ಜನರು ಸರಕಾರದ ಕಿವಿಹಿಂಡುತ್ತಾ ಈ ಸಾಲುಗಳನ್ನ ಪುನರುಚ್ಚರಿಸಿಯಾರು.. ಇದು ಸೂಕ್ತವಾದ ತೆರಿಗೆ ವಿಧಾನ ಅಂತ ಒಪ್ಪಿಕೊಳ್ಳುವವರೂ ಕೂಡಾ ಆತ್ಮಾವಲೋಕನ ಮಾಡಿಕೊಳ್ಳಬೇಕು.. ಮಹಾಭಾರತದಲ್ಲಿ ತೆರಿಗೆ ಹೇಗೆ ವಸೂಲಿ ಮಾಡಬೇಕೆನ್ನುವ ವಿಧಿ ಇದೆಯೇ ಹೊರತು ತೆರಿಗೆಯಿಂದ ಜನಸಾಮಾನ್ಯರು ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ವಿಚಾರವೇ ಇಲ್ಲ ಅಂದರೆ ಇಲ್ಲಿ ಮಹಾಭಾರತ ಹೇಳಿರುವ ವ್ಯವಸ್ಥೆ ಸೊಗಸಾದದ್ದೇ ಪಡೆಯುವ ರಾಜನೂ ಕೊಡುವ ಪ್ರಜೆಗಳೂ ಮನಃ ಪೂರ್ವಕವಾಗಿ ಆ ನಿಯಮಗಳಿಗೆ ಬದ್ಧರಾಗಬೇಕು ಆಗ ವ್ಯವಸ್ಥೆ ಸರಿಯಾದೀತು ಅಲ್ವೇ..ಯಾಕೆಂದರೆ ಕೀಳುವವರೂ ಅತಿಯಾಗಿ ಕೀಳುತ್ತಾರೆ... ಅದರಿಂದ ತಪ್ಪಿಸಿಕೊಳ್ಳೋಕೆ ನಾನಾಬಗೆಯ ಕಸರತ್ತನ್ನ ಜನರೂ ಮಾಡುತ್ತಾರೆ..