
ಗುರುಪ್ರಸಾದ್ ಆಚಾರ್ಯ ಕುಂಜೂರು
February 7, 2025 at 10:52 AM
ಮಹಾಭಾರತ ಯುದ್ಧ ಮುಗಿದ ಬಳಿಕ ಧರ್ಮರಾಯನಿಗೆ ಭೀಷ್ಮನಿಂದ ರಾಜಧರ್ಮದ ಉಪದೇಶವಾಗುತ್ತದೆ.. ಈ ಉಪದೇಶ ಆರಂಭದಲ್ಲಿ ಧರ್ಮರಾಯ ಕೇಳುವ ಪ್ರಶ್ನೆ ಈ ಜಗತ್ತಿನಲ್ಲಿ ರಾಜನ ಆವಶ್ಯಕತೆ ಹೇಗೆ ಬಂತು..? ಅಂತ.. ಎಂತಹಾ ಸೊಗಸಾದ ಪ್ರಶ್ನೆ... ರಾಜ ಧರ್ಮಕ್ಕೂ ಮುನ್ನ ರಾಜನ ಆವಶ್ಯಕತೆ ಏನು. ಅನ್ನುವಲ್ಲಿಂದ ಸಂಶಯ ಪರಿಹಾರ.. ಬಹುಶಃ ಒಬ್ಬ ಚತುರ ವಿದ್ಯಾರ್ಥಿ ನಡೆ ಇದು.. ಮೂಲದಿಂದಲೇ ಗೊಂದಲ ಪರಿಹಾರ..
ಧರ್ಮರಾಯನ ಪ್ರಶ್ನೆಗೆ ಭೀಷ್ಮನ ಉತ್ತರ... ಹೀಗಿದೆ..
ಹಿಂದೆ ರಾಜ್ಯವೆಂಬುದೂ ಇರಲಿಲ್ಲ ; ರಾಜನೆಂಬುವನೂ ಇರಲಿಲ್ಲ. ದಂಡವೂ ಇರಲಿಲ್ಲ ; ದಂಡಿಸುವುದೂ ಇರಲಿಲ್ಲ. ಎಲ್ಲ ಪ್ರಜೆಗಳೂ ಧರ್ಮ ಮಾರ್ಗದಿಂದಲೇ ಪರಸ್ಪರವಾಗಿ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದರು. ಎಲ್ಲ ಮನುಷ್ಯರೂ ಧರ್ಮದಿಂದಲೇ ಪಾಲನೆ-ಪೋಷಣೆಗಳನ್ನು ಅನ್ನೋನ್ಯ ಸಹಾಯದಿಂದಲೇ ಮಾಡಿಕೊಳ್ಳುತ್ತಿದ್ದರು. ಕೆಲವು ಕಾಲಾನಂತರದಲ್ಲಿ ಅವರೆಲ್ಲರೂ ಮೋಹವಶರಾಗತೊಡಗಿದರು. ಆಗ ಅವರಲ್ಲಿ ಕರ್ತವ್ಯಾಕರ್ತವ್ಯ ಪ್ರಜ್ಞೆಯು ಶೂನ್ಯವಾಯಿತು. ಕರ್ತವ್ಯ ಪ್ರಜ್ಞೆಯ ಶೂನ್ಯತೆಯಿಂದಾಗಿ ಅವರಲ್ಲಿ ಧರ್ಮಾಚರಣೆಯೂ ಅಳಿದು ಹೋಯಿತು. ಅವರೆಲ್ಲರೂ ಲೋಭಾಭಿಭೂತರಾದರು. ಸಿಕ್ಕದೇ ಇರುವ ವಸ್ತುವನ್ನೂ ಪಡೆದುಕೊಳ್ಳುವ ಸಲುವಾಗಿ ಪ್ರಯತ್ನಗಳನ್ನು ಮಾಡತೊಡಗಿದರು. ಆಗ ಅವರ ಮನಸ್ಸನ್ನು 'ಕಾಮ'ವು ಆಕ್ರಮಿಸತೊಡಗಿತು. ಕಾಮವಶರಾದ ಆ ಜನರನ್ನು 'ರಾಗ'ವೂ ಕಾಡತೊಡಗಿತು. ರಾಗಕ್ಕೆ ವಶೀಭೂತರಾದ ಆ ಜನರು ಕಾರ್ಯಾಕಾರ್ಯಗಳನ್ನೂ ವಿವೇಚಿಸುತ್ತಲೇ ಇರಲಿಲ್ಲ. ಸಮಾಗಮ ಮಾಡಲು ಅನರ್ಹರೊಡನೆ ಸಮಾಗಮ ಮಾಡುತ್ತಿದ್ದರು. ಮಾತನಾಡಲು ಯೋಗ್ಯವಾದುದು ; ಮಾತನಾಡಲು ಅಯೋಗ್ಯವಾದುದು, ಭಕ್ಷಿಸಲು ಯೋಗ್ಯವಾದುದು ; ಭಕ್ಷಿಸಲು ಅಯೋಗ್ಯವಾದುದು, ದೋಯುಕ್ತವಾದುದು ; ದೋಷವಿಲ್ಲದುದು ಇವುಗಳಲ್ಲಿ ಯಾವುದನ್ನೂ ಅವರು ಪರಿತ್ಯಜಿಸುತ್ತಿರಲಿಲ್ಲ.
ಹೀಗೆ ಮನುಷ್ಯಲೋಕದಲ್ಲಿ ಕ್ಷೋಭೆಯುಂಟಾಗಲಾಗಿ, ವೇದಗಳ ಅಧ್ಯಯನವೂ ನಿಂತುಹೋಯಿತು. ವೇದಗಳು ನಶಿಸಿಹೋದನಂತರ ಯಜ್ಞ-ಯಾಗಾದಿ ಸಮಸ್ತ ಧಾರ್ಮಿಕ ಕ್ರಿಯೆಗಳೂ ನಾಶಹೊಂದಿದುವು. ವೇದವೂ ಮತ್ತು ಧರ್ಮವೂ ನಾಶವಾಗಲಾಗಿ ದೇವತೆಗಳ ಮನಸ್ಸನ್ನು ಭಯವು ಆವರಿಸಿತು. ಭಯಪೀಡಿತರಾದ ದೇವತೆಗಳು ಬ್ರಹ್ಮನನ್ನು ಶರಣು ಹೊಂದಿದರು. ದುಃಖದ ಆವೇಗದಿಂದ ಪೀಡಿತರಾಗಿದ್ದ ದೇವತೆಗಳು ಚತುರ್ಮುಖ ಬ್ರಹ್ಮನನ್ನು ಸ್ತೋತ್ರಾದಿಗಳಿಂದ ಪ್ರಸನ್ನಗೊಳಿಸಿ ಬದ್ಧಾಂಜಲಿಗಳಾಗಿ ಪ್ರಾರ್ಥಿಸಿದರು :
“ ನರಲೋಕವು ಲೋಭ-ಮೋಹಾದಿ ದುಷ್ಟಭಾವನೆಗಳಿಂದ ಪೀಡಿತವಾಗಿದೆ. ಈ ಕಾರಣದಿಂದ ಸನಾತನವಾದ ವೇದ-ಯಜ್ಞಾದಿಗಳು ಲುಪ್ತವಾಗಿ ಹೋಗಿವೆ. ಆದುದರಿಂದ ನಮ್ಮನ್ನು ಭಯವು ಆವರಿಸಿದೆ.
ವೈದಿಕ ಜ್ಞಾನದ ವಿನಾಶದಿಂದಾಗಿ ಯಜ್ಞಧರ್ಮವೂ ವಿನಾಶಹೊಂದಿತು. ಈ ಕಾರಣದಿಂದ ನಾವು ಮನುಷ್ಯರಿಗೆ ಸಮಾನರಾಗಿಬಿಟ್ಟಿದ್ದೇವೆ. ಮನುಷ್ಯರು ಯಜ್ಞಾದಿಗಳ ಮೂಲಕವಾಗಿ ನಮಗೆ ಬೇಕಾದ ಆಹುತಿಗಳನ್ನು ಊರ್ಧ್ವಮುಖವಾಗಿ ಸುರಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ನಾವು ಮನುಷ್ಯರಿಗೆ ಬೇಕಾದ ಆಹಾರಧಾನ್ಯಗಳನ್ನು ಬೆಳೆಸುವ ಸಲುವಾಗಿ ಅಧೋಮುಖವಾಗಿ ಮಳೆಗರೆಯುತ್ತಿದ್ದೆವು. ಅವರೀಗ ಯಜ್ಞಕ್ರಿಯೆಗಳನ್ನೇ ನಿಲ್ಲಿಸಿಬಿಟ್ಟಿರುವುದರಿಂದ ನಮ್ಮ ಜೀವನವೇ ಸಂಶಯಗ್ರಸ್ತವಾಗಿದೆ. ನೀನೇ ದಾರಿ ತೋರಿಸಬೇಕು.. ಅಂತ ಕೇಳಿಕೊಂಡಾಗ ಬ್ರಹ್ಮ ದೇವತೆಗಳನ್ನು ಸಮಾಧಾನಗೊಳಿಸಿ... ರಾಜನ ಸೃಷ್ಟಿ ಮಾಡುವುದಿಲ್ಲ..ಬದಲಾಗಿ ತನ್ನ ಬುದ್ಧಿಬಲದಿಂದ ಒಂದು ಲಕ್ಷ ಅಧ್ಯಾಯಗಳುಳ್ಳ ನೀತಿಶಾಸ್ತ್ರವನ್ನು ರಚಿಸಿದನು. ಅಂದರೆ ರಾಜನ ಸೃಷ್ಟಿಗೂ ಮುನ್ನ ನೀತಿಶಾಸ್ತ್ರದ ಸೃಷ್ಟಿಯಾಯಿತು..
ಆ ನೀತಿಶಾಸ್ತ್ರದಲ್ಲಿ ಏನೇನಿತ್ತು..? ಇನ್ನೊಮ್ಮೆ ನೋಡೋಣ..