ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 10, 2025 at 10:38 AM
ಈ ಹಿಂದೆ ಬ್ರಹ್ಮನು ನೀತಿಶಾಸ್ತ್ರ ಒಂದನ್ನ ರಚಿಸಿದ್ದ ಬಗ್ಗೆ ಹೇಳಿದ್ದೆ.. ಆ ನೀತಿ ಶಾಸ್ತ್ರದ ವಿಶೇಷತೆ ಏನೆಂದರೆ.. ಆ ನೀತಿಶಾಸ್ತ್ರದಲ್ಲಿ ಧರ್ಮಾರ್ಥಕಾಮಗಳ ಸಂಪೂರ್ಣವಾದ ವಿವರಣೆಯಿದ್ದಿತು. ( ಧರ್ಮ-ಕಾಮಾರ್ಥಗಳೆಂಬ ಮೂರು ಪ್ರಕರಣಗಳನ್ನೂ ಬ್ರಹ್ಮನು ತನ್ನ ನೀತಿಶಾಸ್ತ್ರದಲ್ಲಿ ವಿವರಿಸಿದ್ದ ಕಾರಣ ಧರ್ಮಾರ್ಥ ಕಾಮಗಳ ಸಮೂಹವು `ತ್ರಿವರ್ಗ' ಎಂದೇ ವಿಖ್ಯಾತವಾಯಿತು. ನಾಲ್ಕನೆಯದು ಮೋಕ್ಷಪ್ರಕರಣ. ಅದರ ಪ್ರಯೋಜನವೂ ಮತ್ತು ಗುಣಗಳೂ ತ್ರಿವರ್ಗದಿಂದ ಭಿನ್ನವಾಗಿವೆ. ಮೋಕ್ಷಸಂಬಂಧವಾದ ಮತ್ತೊಂದು ತ್ರಿವರ್ಗವಿದೆ. ಆ ತ್ರಿವರ್ಗದಲ್ಲಿ ಸತ್ವರಜಸ್ತಮೋಗುಣಗಳು ಸೇರಿವೆ. ದಂಡಜನಿತವಾದ ತ್ರಿವರ್ಗವು ಮತ್ತೊಂದು. ಸ್ಥಾನ, ವೃದ್ಧಿ, ಕ್ಷಯ-ಈ ಮೂರು ದಂಡದಿಂದ ಹುಟ್ಟಿದ ತ್ರಿವರ್ಗವಾಗಿದೆ. ) ಬ್ರಹ್ಮನ ನೀತಿಶಾಸ್ತ್ರದಲ್ಲಿ ಯಾವ ಯಾವ ವಿಚಾರಗಳ ವಿವರಣೆ ಇದೆ...? ಬ್ರಹ್ಮನು ರಚಿಸಿರುವ ನೀತಿಶಾಸ್ತ್ರದಲ್ಲಿ ೧.ಆತ್ಮಾ, ದೇಶ, ಕಾಲ, ಉಪಾಯಗಳು, ಕಾರ್ಯ ಮತ್ತು ಸಹಾಯಕರು ಈ ಷಡ್ವರ್ಗದ ವರ್ಣನೆಯಿದೆ. ೨. ತ್ರಯೀ ( ಕರ್ಮಕಾಂಡ ), ಆನ್ವೀಕ್ಷಿಕೀ ವಿದ್ಯೆ (ಜ್ಞಾನಕಾಂಡ ), ವಾರ್ತೆ ( ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ ) ಮತ್ತು ದಂಡನೀತಿ-ಈ ವಿಭಾಗಗಳಲ್ಲಿ ವಿಪುಲವಾದ ವಿದ್ಯೆಗಳ ನಿರೂಪಣೆಯಿದೆ. ೩. ಮಂತ್ರಿಗಳ ರಕ್ಷಣೆ, ರಾಜದೂತನ (ರಾಯಭಾರಿಯ ) ಮತ್ತು ರಾಜಪುತ್ರನ ಲಕ್ಷಣಗಳು, ಗುಪ್ತಚಾರ ಮತ್ತು ಅವರು ಕೈಗೊಳ್ಳಬೇಕಾದ ವಿವಿಧೋಪಾಯಗಳು, ವಿಭಿನ್ನಸ್ಥಾನಗಳಲ್ಲಿ ಆಯಾಸ್ಥಾನಗಳಿಗೆ ಅನುಸಾರವಾಗಿ ವಿಭಿನ್ನರಾದ ಗುಪ್ತಚಾರರನ್ನಿಡುವುದು. ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷಾ-ಈ ಐದು ಉಪಾಯಗಳು- ಈ ಎಲ್ಲದರ ವಿಷಯವಾಗಿಯೂ ವಿಸ್ತಾರವಾದ ವರ್ಣನೆಯಿದೆ. ೪. ಸಕಲವಿಧವಾದ ಮಂತ್ರಾಲೋಚನೆಗಳು, ಭೇದನೀತಿ ಪ್ರಯೋಗದ ಪ್ರಯೋಜನ, ರಹಸ್ಯವಾದ ಮಂತ್ರಾಲೋಚನೆಗಳು ಬಹಿರಂಗವಾಗುವುದರಿಂದ ಪ್ರಾಪ್ತವಾಗಬಹುದಾದ ಭಯ, ಮಂತ್ರಾಲೋಚನೆಯು ಸಿದ್ದಿಸಿದರೆ ಪ್ರಾಪ್ತವಾಗಬಹುದಾದ ಫಲಗಳು, ಸಿದ್ಧಿಸದಿದ್ದರೆ ಆಗುವ ದುಷ್ಪಲಗಳ ವರ್ಣನೆಯಿದೆ. ೫. ಸಂಧಿಯಲ್ಲಿ ಉತ್ತಮ, ಮಧ್ಯಮ ಮತ್ತು ಅಧಮಗಳೆಂಬ ಮೂರು ಭೇದಗಳಿವೆ. ಅವುಗಳಿಗೆ ಅನುಕ್ರಮವಾಗಿ ವಿತ್ತಸಂಧಿ, ಸತ್ಕಾರಸಂಧಿ ಮತ್ತು ಭಯಸಂಧಿಗಳೆಂಬ ಸಂಜ್ಞೆಗಳಿವೆ. ಅಪಾರವಾಗಿ ಧನವನ್ನು ತೆಗೆದುಕೊಂಡು ಸಂಧಿಮಾಡಿಕೊಳ್ಳುವುದು ಉತ್ತಮಸಂಧಿ. ಸತ್ಕಾರವನ್ನು ಪಡೆದುಕೊಂಡು ಸಂಧಿಮಾಡಿಕೊಳ್ಳುವುದು ಮಧ್ಯಮಸಂಧಿ, ಭಯದಿಂದ ಸಂಧಿಮಾಡಿಕೊಳ್ಳುವುದು ಅಧಮಸಂಧಿ, ಈ ಮೂರು ಸಂಧಿಗಳ ಸಂಪೂರ್ಣವಾದ ವರ್ಣನೆಯಿದೆ. ೬. ಯಾನ ಅಥವಾ ಯಾತ್ರೆ ಎಂದರೆ ಶತ್ರುವಿನ ಮೇಲೆ ಯುದ್ಧಕ್ಕೆ ಹೋಗುವುದು. ಇದಕ್ಕೆ ನಾಲ್ಕು ಕಾಲವಿಶೇಷಗಳಿವೆ. ತನ್ನ ಮಿತ್ರರ ವೃದ್ಧಿ, ತನ್ನ ರಾಜ್ಯದ ಬೊಕ್ಕಸದ ತುಂಬಿರುವಿಕೆ, ಶತ್ರುವಿನ ಮಿತ್ರರನಾಶ, ಶತ್ರುಗಳ ಬೊಕ್ಕಸದ ನಾಶ-ಇವು ದಂಡಯಾತ್ರೆಯ ಕಾಲಗಳು, ವಿಜಯಕ್ಕೆ ಸಂಬಂಧಿಸಿದಂತೆ ಧರ್ಮವಿಜಯ, ಅರ್ಥವಿಜಯ ಮತ್ತು ಆಸುರವಿಜಯ ಎಂಬ ತ್ರಿವರ್ಗಗಳನ್ನು ವಿಸ್ತಾರವಾದ ವಿವರಣೆಯಿದೆ. ೭. ಮಂತ್ರಿ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಕೋಶ-ಎಂಬ ಪಂಚವರ್ಗದ ಲಕ್ಷಣಗಳೂ, ಆ ಪಂಚವರ್ಗದಲ್ಲಿ ಉತ್ತಮ-ಮಧ್ಯಮಾಧಮಗಳೆಂಬ ಮೂರು ವಿಧಾನಗಳ ವರ್ಣನೆಯಿದೆ. ೮. ದಂಡದಲ್ಲಿ ( ಸೈನ್ಯದಲ್ಲಿ) ಪ್ರಕಾಶ ಮತ್ತು ಗುಪ್ತಗಳೆಂಬ ಎರಡು ಪ್ರಭೇದಗಳಿವೆ. ಪ್ರತ್ಯಕ್ಷವಾದ ಸೈನ್ಯದಲ್ಲಿ ಎಂಟು ಭೇದಗಳಿವೆ. ಗುಪ್ತಸೇನೆಯ ಬಹುವಿಸ್ತಾರವಾದ ವರ್ಣನೆಯಿದೆ. ೯. ರಥಗಳು, ಆನೆಗಳು, ಕುದುರೆಗಳು, ಪದಾತಿಗಳು, ಭಾರವನ್ನು ಹೊರುವವರು, ನಾವಿಕರು, ಗೂಢಚಾರರು ಮತ್ತು ಕಾಲಕಾಲಕ್ಕೆ ಮಾಡಬೇಕಾದ ಕರ್ತವ್ಯಗಳನ್ನು ತಿಳಿಯ ಹೇಳುವ ಆಚಾರ್ಯರು-ಇವುಗಳೇ ಪ್ರತ್ಯಕ್ಷಸೈನ್ಯದ ಅಷ್ಟಾಂಗಗಳು.ಜಂಗಮಗಳೆಂದರೆ ಚಲಿಸುವ ಸರ್ಪಾದಿಗಳಿಂದ ಉತ್ಪನ್ನವಾದ ವಿಷಾದಿಚೂರ್ಣಯೋಗಗಳು, ಅಜಂಗಮ ಅಥವಾ ಸ್ಥಾವರಗಳೆಂದರೆ ಮರ-ಗಿಡ-ಬಳ್ಳಿಗಳಿಂದ ಉತ್ಪನ್ನವಾದ ವಿಷ-ಚೂರ್ಣಾದಿಗಳು. ಇವು ಸೈನ್ಯದ ಗುಪ್ತಾಂಗಗಳು. ಗುಪ್ತಸಾಧನವಾದ ವಿಷಾದಿಗಳನ್ನು ಆಯುಧಗಳ ಮೂಲಕ ಅಥವಾ ವಸ್ತ್ರಾದಿಗಳ ಮೂಲಕ ಶತ್ರುವಿಗೆ ಸ್ಪರ್ಶವಾಗುವಂತೆ ಮಾಡವುದು. ಶತ್ರುಗಳ ಭೋಜನಾದಿಗಳಲ್ಲಿ ವಿಷವು ಬೆರೆಯುವಂತೆ ಮಾಡುವುದು. ಶತ್ರುನಾಶಕವಾದ ಅನೇಕಮಂತ್ರಗಳನ್ನು ಜಪಿಸುವುದು. ಇಷ್ಟೇ ಅಲ್ಲದೇ ಅರಿ, ಮಿತ್ರ ಮತ್ತು ಉದಾಸೀನರ ಬಗ್ಗೆಯೂ ವಿವರವಾದ ವರ್ಣನೆಯಿದೆ. ೧೦. ಸಮಸ್ತವಾದ ಗ್ರಹ-ನಕ್ಷತ್ರಮಾರ್ಗಗುಣಗಳು ( ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದರಿಂದ ಉಂಟಾಗುವ ಮಾರ್ಪಾಡುಗಳು ; ನಕ್ಷತ್ರಗಳ ಉದಯಾಸ್ತಗಳಿಂದ ಆಗುವ ಪರಿಣಾಮಗಳು. ) ಎಂಬತ್ತುನಾಲ್ಕು ಭೂಮಿಯ ಗುಣಗಳು ಅಥವಾ ಬಲಗಳು. ಮಂತ್ರ-ಯಂತ್ರಾದಿಗಳಿಂದ ಮಾಡಿಕೊಳ್ಳಬೇಕಾದ ಆತ್ಮರಕ್ಷಣೆ, ಆಶ್ವಾಸನೆ, ರಥಾದಿಗಳ ನಿರ್ಮಾಣ ಮತ್ತು ಅವುಗಳ ನಿರೀಕ್ಷೆ ಇವುಗಳ ವರ್ಣನೆಯಿದೆ. ೧೧. ಸೈನ್ಯವನ್ನು ಪುಷ್ಟಿಗೊಳಿಸಲು ಕೈಗೊಳ್ಳಬೇಕಾದ ನಾನಾವಿಧವಾದ ಉಪಾಯಗಳು, ಆನೆ, ಕುದುರೆ, ರಥ, ಕಾಲಾಳುಗಳ ಮೂಲಕವಾಗಿ ರಚಿಸಬಹುದಾದ ನಾನಾವಿಧವಾದ ವ್ಯೂಹರಚನೆಗಳು. ನಾನಾಪ್ರಕಾರವಾದ ಮತ್ತು ವಿಚಿತ್ರವಾದ ಯುದ್ಧಕೌಶಲ, ದ್ವಂದ್ವಯುದ್ಧಮಾಡುವಾಗ ಮೇಲಕ್ಕೆ ಹಾರುವುದು, ತಪ್ಪಿಸಿಕೊಳ್ಳುವ ಸಲುವಾಗಿ ಕೆಳಕ್ಕೆ ಬೀಳುವುದು, ಎದುರಿಗೆ ನಿಂತು ಧರ್ಮಾನುಸಾರವಾಗಿ ಯುದ್ಧಮಾಡುವುದು, ಶತ್ರುವಿಗೆ ಬಲವಾದ ಪೆಟ್ಟುಕೊಟ್ಟು ಪಲಾಯನ ಮಾಡುವುದು, (ಯುದ್ಧತಂತ್ರವನ್ನು ಅನುಸರಿಸಿ ಹಿಮ್ಮೆಟ್ಟುವುದು,) ಇವುಗಳ ವಿವರಣೆಯಿದೆ. ೧೨. ಉತ್ಪಾತಃ- ಗ್ರಹಯುದ್ಧ ; ಧೂಮಕೇತು ದರ್ಶನಗಳು, ನಿಪಾತಃ -ಉಲ್ಕಾಪಾತ ಭೂ-ಕಂಪನಾದಿಗಳು ಯಾವಾಗ ಸಂಭವಿಸುವುವೆಂಬುದರ ವಿವರಣೆ,ಶಸ್ತ್ರಗಳನ್ನು ಹರಿತಗೊಳಿಸುವ ವಿಧಾನ ಅವುಗಳ ಸಂರಕ್ಷಣೆ ಮತ್ತು ಪ್ರಯೋಗಗಳ ವಿವರಣೆಯಿದೆ. ೧೩. ಸೈನ್ಯಕ್ಕೆ ಒದಗುವ ವ್ಯಸನಗಳು (ತೊಂದರೆಗಳು), ಸೈನಿಕರನ್ನು ಹರ್ಷಗೊಳಿಸುವ ಮತ್ತು ಪ್ರೋತ್ಸಾಹಗೊಳಿಸುವ ಬಗೆ, ಶತ್ರುಪೀಡೆ, ರಾಜಧಾನಿಯನ್ನು ಬಿಟ್ಟು ಬೇರೆ ಕಡೆಯಲ್ಲಿ ಇರಬೇಕಾದ ಕಾಲ, ಪದಾತಿಸೈನಿಕರ ಸ್ವಾಮಿನಿಷ್ಠೆಯ ಪರೀಕ್ಷಾವಿಧಾನ-ಇವುಗಳ ವಿವರವಿದೆ. ೧೪. ದುರ್ಗದ ನಾಲ್ಕು ಕಡೆಗಳಲ್ಲಿಯೂ ಕಂದಕಗಳನ್ನು ತೋಡುವ ಕ್ರಮ, ಚತುರಂಗಸೈನ್ಯಗಳನ್ನೂ ಯುದ್ಧಕ್ಕಾಗಿ ಸಜ್ಜುಗೊಳಿಸುವುದು, ರಣಯಾತ್ರೆ, ಭಯಂಕರರಾದ ಕಾಡುಜನರ ಮತ್ತು ಕಳ್ಳ-ಕಾಕರ ಮೂಲಕವಾಗಿ ಶತ್ರುಗಳ ರಾಜ್ಯಕ್ಕೆ ಪೀಡೆಯನ್ನುಂಟುಮಾಡುವುದು, ಬೆಂಕಿಯಿಡುವುದರಿಂದಲೂ ವಿಷಹಾಕುವುದರಿಂದಲೂ ಕೃತ್ರಿಮ ಪತ್ರಗಳ ಸೃಷ್ಟಿಕರ್ತರಿಂದಲೂ ಶತ್ರುಪಕ್ಷದ ಪ್ರಮುಖರಿಗೆ ಹಾನಿಯನ್ನುಂಟುಮಾಡುವುದು, ಮಂತ್ರಿ-ಸೇನಾಪತಿಗಳ ವೇಷಧಾರಿಗಳನ್ನು ಕಳುಹಿಸಿ ಶತ್ರುಗಳನ್ನು ಮೋಸಗೊಳಿಸುವುದು, ಶತ್ರು ಸೇನಾದಳಗಳ ಮುಖ್ಯರಿಗೆ ಪರಸ್ಪರವಾಗಿ ಭಿನ್ನಾಭಿಪ್ರಾಯವುಂಟಾಗುವಂತೆ ಮಾಡುವುದು, ಬೆಳೆದು ನಿಂತಿರುವ ಫಸಲನ್ನು ಕತ್ತರಿಸಿ ಹಾಕುವುದು, ಶತ್ರುಪಕ್ಷದ ಆನೆಗಳನ್ನು ರೇಗಿಸುವುದು, ಶತ್ರುರಾಜ್ಯದ ಪ್ರಜೆಗಳಿಗೆ ಆತಂಕವನ್ನುಂಟುಮಾಡುವುದು, ಶತ್ರುಪಕ್ಷದಲ್ಲಿಯೇ ಅನುರಕ್ತನಾದ ಮತ್ತು ಶತ್ರು ಪಕ್ಷದಲ್ಲಿ ಅತ್ಯಂತಮುಖ್ಯನಾದವನನ್ನು ವಿಶೇಷವಾಗಿ ಪುರಸ್ಕರಿಸುವುದರ ಮೂಲಕ ತನ್ನ ಕಡೆಗೆ ಒಲಿಸಿಕೊಳ್ಳುವುದು-ಈ ಎಲ್ಲ ವಿಷಯಗಳ ವಿಸ್ತಾರವಾದ ವಿವರಣೆಯಿದೆ. ೧೫. ಸಪ್ತಾಂಗಯುಕ್ತವಾದ ರಾಜ್ಯದ ಕ್ಷಯ, ವೃದ್ಧಿ ಮತ್ತು ಸಮತ್ವಗಳ ವರ್ಣನೆಯೂ, ದೂತನ ಸಾಮರ್ಥ್ಯದ ಸಹಯೋಗದಿಂದ ತನ್ನನ್ನೂ ಮತ್ತು ರಾಷ್ಟ್ರವನ್ನೂ ವೃದ್ಧಿಗೊಳಿಸಿಕೊಳ್ಳುವ ವಿಧಿ-ವಿಧಾನಗಳ ವಿವರಣೆಯಿದೆ. ೧೬. ಅರಿ, ಮಧ್ಯಸ್ಥ ಮತ್ತು ಮಿತ್ರರ ವಿಸ್ತಾರವಾದ ವಿವೇಚನೆ, ಬಲಿಷ್ಠರಾದ ಶತ್ರುಗಳನ್ನು ಉಪಾಯಾಂತರಗಳಿಂದ ನಾಶಪಡಿಸುವುದು, ಸಮಯವು ಒದಗಿಬಂದಾಗ ಶತ್ರುಗಳ ಉಪಾಯಗಳನ್ನು ಭಂಗ ಗೊಳಿಸುವುದು-ಇವುಗಳ ವಿಧಾನಗಳ ವಿವರಣೆಯಿದೆ. ೧೬. ಶಾಸನ ಸಂಬಂಧವಾದ ಅತಿಸೂಕ್ಷ್ಮವಾದ ವ್ಯವಹಾರ, ಕಂಟಕಶೋಧನ (ರಾಜ್ಯವ್ಯವಹಾರದಲ್ಲಿ ವಿಘ್ನವನ್ನುಂಟುಮಾಡುವವರನ್ನು ಕಂಡುಹಿಡಿದು ಧ್ವಂಸಮಾಡುವುದು), ವ್ಯಾಯಾಮಯೋಗ (ಆಯುಧಗಳ ಪ್ರಯೋಗಾಭ್ಯಾಸಗಳು), ಪರಿಶ್ರಮ (ಮಲ್ಲಕ್ರೀಡೆ ಮುಂತಾದುವುಗಳು), ಧನದ ತ್ಯಾಗ ಮತ್ತು ಧನದ ಸಂಗ್ರಹ-ಈ ವಿಷಯಗಳ ವಿವರಣೆಯಿದೆ. ೧೭. ರಾಜ್ಯದಲ್ಲಿ ಯಾರ ಭರಣ-ಪೋಷಣೆಗಳು ಆಗುತ್ತಿಲ್ಲವೋ, ಯಾರು ಕೆಲಸಮಾಡಲು ಅಶಕ್ತರಾಗಿರುವರೋ, ನಿರ್ಗತಿಕರಾಗಿರುವರೋ, ಅಂತಹವರ ಭರಣ-ಪೋಷಣೆಗಳನ್ನು ರಾಜನೇ ನೋಡಿಕೊಳ್ಳಬೇಕು. ರಾಜ್ಯವು ಯಾರಿಗೆ ಭರಣ-ಪೋಷಣಗಳ ವ್ಯವಸ್ಥೆಯನ್ನು ಮಾಡಿರುವುದೋ ಅಂತಹವರ ನಡೆ, ನುಡಿ, ಕಾರ್ಯಗಳ ಬಗೆಗೆ ದೃಷ್ಟಿಯನ್ನಿಟ್ಟುಕೊಳ್ಳಬೇಕಾದ ಬಗೆಗೆ ವಿವರಣೆಯಿದೆ. ೧೮. ರಾಜನ ಗುಣಗಳು, ಸೇನಾಪತಿಯ ಗುಣಗಳು, ತ್ರಿವರ್ಗಾನುಷ್ಠಾನದ ಕಾರಣಗಳು ಮತ್ತು ಗುಣದೋಷಗಳು ಇವುಗಳ ವಿವರಣೆಯಿದೆ. ೧೯. ನಾನಾವಿಧವಾದ ದುಶ್ಚೇಷ್ಟಿತಗಳು (ದುರ್ವ್ಯವಹಾರಗಳು ), ತನ್ನನ್ನೇ ಅನುಸರಿಸಿ ಇರತಕ್ಕವರಿಗೆ ವಹಿಸಿಕೊಡಬಹುದಾದ ಕಾರ್ಯಭಾರಗಳು, ಎಲ್ಲರ ವಿಷಯದಲ್ಲಿಯೂ ಸಂದೇಹಿಸುವುದು, ಕರ್ತವ್ಯದಲ್ಲಿ ಅಲಕ್ಷವನ್ನು ಅಕರ್ತವ್ಯದಲ್ಲಿ ಆಸಕ್ತಿಯನ್ನು ವಿಸರ್ಜಿಸುವುದು, ಲಭಿಸದೇ ಇರುವ ವಸ್ತುವನ್ನು ಪಡೆದುಕೊಳ್ಳುವುದು, ಪಡೆದುಕೊಂಡ ವಸ್ತುವನ್ನು ರಕ್ಷಿಸುವುದು ಮತ್ತು ಅದನ್ನು ವೃದ್ಧಿಸುವುದು, ಹಾಗೆ ವೃದ್ಧಿಸಿದ ವಸ್ತುವನ್ನು (ಐಶ್ವರ್ಯವನ್ನು) ಸತ್ಪಾತ್ರರಿಗೆ ವಿಧಿವತ್ತಾಗಿ ಹಂಚಿಕೊಡುವುದು, ವೃದ್ದಿಸಿದ ಐಶ್ವರ್ಯವನ್ನು ಧರ್ಮಾರ್ಥವಾಗಿ ತ್ಯಾಗಮಾಡುವುದು, ಕಾಮೋಪಭೋಗಗಳಿಗಾಗಿ ವ್ಯಯಿಸುವುದು, ಯಾವುದಾದರೂ ಸಂಕಟವು ಒದಗಿದಲ್ಲಿ ಅದರ ನಿವಾರಣೆಗಾಗಿ ಸಂಚಿತವಾದ ಐಶ್ವರ್ಯವನ್ನು ವ್ಯಯಿಸುವುದು-ಹೀಗೆ ಕೂಡಿಹಾಕಿ ವೃದ್ಧಿಪಡಿಸಿದ ಐಶ್ವರ್ಯವನ್ನು ವ್ಯಯಿಸಲು ಇರುವ ನಾಲ್ಕು ಮಾರ್ಗಗಳ ವಿವರಣೆಯಿದೆ. ೨೦. ಕಾಮ-ಕ್ರೋಧಗಳಿಂದ ಹುಟ್ಟುವ ಹತ್ತು ವಿಧವಾದ ಭಯಂಕರ ವ್ಯಸನಗಳ ವಿವರಣೆಯಿದೆ. (ಬೇಟೆಯಾಡುವುದು, ಜೂಜಾಡುವುದು, ಮದ್ಯಪಾನಮಾಡುವುದು ಮತ್ತು ಸರ್ವದಾ ಸ್ತ್ರೀಯರಲ್ಲಿಯೇ ಆಸಕ್ತನಾಗಿರುವುದು-ಇವುಗಳನ್ನು ಕಾಮಜನ್ಯವಾದ ವ್ಯಸನಗಳೆಂದು ಹೇಳುತ್ತಾರೆ. ಮಾತಿನಲ್ಲಿ ಕಾಠಿಣ್ಯ, ಉಗ್ರತೆ, ಉಗ್ರವಾಗಿ ದಂಡಿಸುವುದು, ತನ್ನ ಶರೀರವನ್ನೇ ದಂಡಿಸಿಕೊಳ್ಳುವುದು, ಬಂಧು-ಬಳಗದವರನ್ನು ಕೋಪಾವೇಶದಿಂದ ಕಾರಣವಿಲ್ಲದೇ ತ್ಯಾಗಮಾಡುವುದು, ಅರ್ಥದೂಷಣ-ಅರ್ಥಹಾನಿ (ಕೋಪವಶನಾಗಿ ಕೈಗೆ ಸಿಕ್ಕಿದ ವಸ್ತುಗಳನ್ನು ಒಡೆದುಹಾಕುವುದು )-ಇವು ಆರೂ ಕ್ರೋಧಜನ್ಯವಾದ ವ್ಯಸನಗಳೆನ್ನುತ್ತಾರೆ. ೨೧. ನಾನಾವಿಧವಾದ ಯಂತ್ರಗಳೂ ಮತ್ತು ಆ ಯಂತ್ರಗಳ ಮೂಲಕವಾಗಿ ಆಗುವ ವಿಧವಿಧವಾದ ಕಾರ್ಯಗಳ ವರ್ಣನೆಯಿದೆ. ೨೨. ಶತ್ರುಗಳ ರಾಷ್ಟ್ರವನ್ನು ಧ್ವಂಸಗೊಳಿಸುವುದು, ಶತ್ರುಗಳ ಸೈನ್ಯಕ್ಕೆ ಆಘಾತವನ್ನುಂಟುಮಾಡುವುದು, ಶತ್ರುಗಳ ರಾಜಧಾನಿಗಳಲ್ಲಿರುವ ಮನೆ-ಮಠಗಳನ್ನು ನಿರ್ನಾಮಗೊಳಿಸುವುದು. ಶತ್ರುಗಳ ರಾಜಧಾನಿಯಲ್ಲಿರುವ ಚೈತ್ಯವೃಕ್ಷಗಳನ್ನು ( ಅಶ್ವತ್ಥವೇ ಮೊದಲಾದ ದೊಡ್ಡ ದೊಡ್ಡ ವೃಕ್ಷಗಳನ್ನು ) ಧ್ವಂಸಮಾಡುವುದು, ಶತ್ರುವಿನ ಅರಮನೆಯನ್ನು ಅಥವಾ ರಾಜಧಾನಿಯನ್ನು ನಾಲ್ಕು ದಿಕ್ಕುಗಳಿಂದಲೂ ಮುತ್ತಿಗೆಹಾಕುವುದು-ಇವುಗಳಿಗೆ ಸಂಬಂಧಿಸಿದ ಉಪಾಯಗಳ ವಿವರಣೆಯಿದೆ. ೨೩. ಕೃಷಿ, ಶಿಲ್ಪ-ಇವುಗಳೇ ಮೊದಲಾದುವನ್ನು ಹೇಗೆ ಮಾಡಬೇಕೆಂಬ ವಿವರ, ರಥದ ಅಂಗಗಳ ನಿರ್ಮಾಣ, ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಗೃಹನಿರ್ಮಾಣ ವಿಧಿ, ಜೀವನನಿರ್ವಹಣೆಗೆ ಇರುವ ಅನೇಕೋಪಾಯಗಳ ವಿವರಣೆಯಿದೆ. ೨೪. ಮದ್ದಳೆ, ನಗಾರಿ, ಶಂಖ, ಭೇರೀ-ಇವೇ ಮೊದಲಾದ ರಣವಾದ್ಯಗಳನ್ನು ಬಾರಿಸುವ ಕ್ರಮ ; ಮಣಿ, ಪಶು, ಪೃಥ್ವಿ, ವಸ್ತ್ರ, ದಾಸ- ದಾಸಿಯರು ಮತ್ತು ಸುವರ್ಣ-ಇವುಗಳನ್ನು ಸಂಪಾದಿಸುವ ವಿಧಾನ ; ಶತ್ರುಪಕ್ಷದಲ್ಲಿರುವ ಇವೇ ಆರು ವಸ್ತುಗಳನ್ನು ವಿಧ್ವಂಸಮಾಡುವ ವಿಧಾನಗಳ ವಿವರಣೆಯಿದೆ. ೨೫. ತನ್ನ ಅಧೀನಕ್ಕೊಳಪಟ್ಟಿರುವ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದು, ಸತ್ಪುರುಷರನ್ನು ಸತ್ಕರಿಸುವುದು, ವಿದ್ವಾಂಸರೊಡನೆ ನಿಕಟವಾದ ಸಂಬಂಧವನ್ನಿಟ್ಟುಕೊಳ್ಳುವುದು, ದಾನ ಮತ್ತು ಹೋಮಗಳ ವಿಧಿಯನ್ನು ತಿಳಿದುಕೊಳ್ಳುವುದು, ಮಂಗಲವಸ್ತುಗಳನ್ನು ಸ್ಪರ್ಶಿಸುವುದು, ಶರೀರವನ್ನು ವಸ್ತ್ರದಿಂದಲೂ ಮತ್ತು ಆಭರಣಗಳಿಂದಲೂ ಸಿಂಗರಿಸಿಕೊಳ್ಳುವ ರೀತಿ, ಭೋಜನದ ವ್ಯವಸ್ಥೆ, ಸರ್ವದಾ ಆಸ್ತಿಕ ಬುದ್ಧಿಯಿಂದಲೇ ಇರುವುದರ ಬಗೆಗಿನ ವಿವರಣೆಯಿದೆ. ೨೬. ರಾಜನು ಏಕಾಕಿಯಾಗಿದ್ದರೂ ಉನ್ನತಸ್ಥಿತಿಗೆ ಬರುವ ವಿಧಾನಗಳು, ಸತ್ಯನಿಷ್ಠೆ, ಉತ್ಸವಾದಿಗಳಲ್ಲಿ ಮತ್ತು ಸಮಾಜದಲ್ಲಿ ಹೇಳಬೇಕಾದ ಮಧುರವಾದ ಮಾತುಗಳು, ಮಾಡಬೇಕಾದ ಕೆಲಸಗಳು ಮತ್ತು ಗೃಹಕೃತ್ಯಗಳಿಗೆ ಸಂಬಂಧಿಸಿದ ವಿಷಯಗಳ ವಿವರಣೆಯಿದೆ. ೨೭. ದೇಶದ ಎಲ್ಲ ನ್ಯಾಯಾಲಯಗಳಲ್ಲಿಯೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯಾವ ವ್ಯವಹಾರಗಳು ನಡೆಯುತ್ತಿರುತ್ತವೆಯೋ ಮತ್ತು ಅಲ್ಲಿನ ನ್ಯಾಯಾಧೀಶರು ಯಾವ ವಿಧವಾದ ವ್ಯವಹಾರಗಳನ್ನು ಇಟ್ಟುಕೊಂಡಿರುತ್ತಾರೆಯೋ ಆ ಎಲ್ಲ ವಿಷಯಗಳನ್ನೂ ರಾಜನಾದವನು ಪ್ರತ್ಯಕ್ಷವಾಗಿ ಅಥವಾ ಚಾರರ ಮೂಲಕವಾಗಿ ಗಮನಿಸುತ್ತಲೇ ಇರಬೇಕು. ಅವುಗಳ ಬಗೆಗಿನ ವಿವರಣೆಯಿದೆ. ೨೮. ಬ್ರಾಹ್ಮಣರನ್ನು ಶಾರೀರಕವಾಗಿ ಶಿಕ್ಷಿಸದಿರುವುದು, ಅಪರಾಧಿಗಳಿಗೆ ಯುಕ್ತಿಪೂರ್ವಕವಾಗಿ ದಂಡವನ್ನು ವಿಧಿಸುವುದು, ಮತ್ತು ತನ್ನ ಅನುಯಾಯಿಗಳಿಗೂ, ಜ್ಞಾತಿಬಾಂಧವರಿಗೂ ಗುಣವಂತರಿಗೂ, ಹೇಗೆ ಅನುಕೂಲ ಮಾಡಿಕೊಡಬೇಕೆಂಬುದರ ವಿವರಣೆಯಿದೆ. ೨೯. ಪಟ್ಟಣಿಗರ ರಕ್ಷಣೆ, ರಾಷ್ಟ್ರದ ವೃದ್ಧಿ, ಮಂಡಲಸ್ಥರಾದ ಹನ್ನೆರಡು ಬಗೆಯ ರಾಜರ [ ನಾಲ್ಕು ದಿಕ್ಕುಗಳಲ್ಲಿಯೂ ಇರುವ ನಾಲ್ವರು ಶತ್ರುರಾಜರು, ನಾಲ್ವರು ಮಿತ್ರರಾಜರು, ನಾಲ್ವರು ಉದಾಸೀನರಾಜರು-ಒಟ್ಟು ಹನ್ನೆರಡು ] ಸಂಬಂಧವಾದ ಚಿಂತೆ-ಇವುಗಳೆಲ್ಲದರ ವಿವರಣೆಯಿದೆ. ೩೦. ವೈದ್ಯಶಾಸ್ತ್ರಾನುಸಾರವಾಗಿ ಶರೀರಕ್ಕೆ ನಡೆಸುವ ಎಪ್ಪತ್ತೆರಡು ವಿಧವಾದ ಚಿಕಿತ್ಸೆಗಳು, ದೇಶ, ಜಾತಿ ಮತ್ತು ಕುಲಗಳ ಧರ್ಮಗಳ ವಿವರಣೆಯಿದೆ. ೨೧. ಆ ಮಹಾಗ್ರಂಥದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಪ್ರಾಪ್ತೋಪಾಯಗಳ ಬಗೆಗೂ ನಾನಾಪ್ರಕಾರವಾದ ಧನಾಭಿಲಾಷೆಗಳ ಬಗೆಗೂ ವಿವರಣೆಯಿದೆ. ೩೨. ಕೋಶವನ್ನು ವೃದ್ಧಿಗೊಳಿಸುವ ಮೂಲಕರ್ಮಗಳಾದ ಕೃಷಿ-ವಾಣಿಜ್ಯಾದಿಗಳನ್ನು ಹೇಗೆ ಮಾಡಬೇಕೆಂಬುದರ ವಿವರ, ಮಾಯಾ ಪ್ರಯೋಗವನ್ನು ಯಾವ ಸಮಯದಲ್ಲಿ ಹೇಗೆ ಮಾಡಬೇಕೆಂಬುದರ ವಿವರ, ಹರಿಯುವ ಮತ್ತು ನಿಂತಿರುವ ನೀರಿನ ದೂಷಣವಿಧಾನ (ಕೆಡಿಸುವ ರೀತಿ)ಗಳ ವಿವರಣೆಯೂ ಇದೆ. ೩೩. ಯಾವ ಯಾವ ಉಪಾಯಗಳಿಂದ ಈ ಜಗತ್ತು ಸನ್ಮಾರ್ಗದಿಂದ ವಿಚಲಿತವಾಗುವುದಿಲ್ಲವೋ-ಆ ಎಲ್ಲ ಉಪಾಯಗಳ ವಿವರಣೆಯಿದೆ.

Comments