
ಗುರುಪ್ರಸಾದ್ ಆಚಾರ್ಯ ಕುಂಜೂರು
February 22, 2025 at 10:06 AM
ಭೀಷ್ಮ ಯುಧಿಷ್ಠಿರನ ಬಳಿ ಹೇಳಿದ, ವೈಶ್ಯರು ಅನುಸರಿಸಬೇಕಾದ ಧರ್ಮಗಳು...
೧. ದಾನ, ಅಧ್ಯಯನ, ಯಜ್ಞಗಳನ್ನು ಮಾಡುವುದು ಮತ್ತು ಶುದ್ಧ ಮಾರ್ಗದಿಂದ ಹಣವನ್ನು ಸಂಗ್ರಹಿಸುವುದು-ಇವು ವೈಶ್ಯನ ಕರ್ಮಗಳಾಗಿರುತ್ತವೆ.
೨. ವೈಶ್ಯನು ಸರ್ವದಾ ಉದ್ಯೋಗಶೀಲನಾಗಿದ್ದು ತಂದೆಯಾದವನು ಮಕ್ಕಳನ್ನು ಪೋಷಿಸುವಂತೆ ಎಲ್ಲ ವಿಧವಾದ ಪಶುಗಳನ್ನೂ ಅಕ್ಕರೆಯಿಂದಲೂ ಮತ್ತು ಜಾಗರೂಕತೆಯಿಂದಲೂ ಪಾಲನೆಮಾಡಬೇಕು.
೩. ಪಶುಪಾಲನಕರ್ಮವನ್ನು ಬಿಟ್ಟು ವೈಶ್ಯನು ಬೇರೆ ಯಾವುದೇ ಕರ್ಮವನ್ನು ಮಾಡಿದರೂ ಅದು ವಿಕರ್ಮವೇ ಆಗುತ್ತದೆ. ( ಸ್ವಕರ್ಮವನ್ನು ಮಾಡಿ ದಂತಾಗುವುದಿಲ್ಲ. )
೪. ವೈಶ್ಯನು ರಾಜನಿಂದ ಅಥವಾ ಪ್ರಜೆಗಳಿಂದ ಆರು ಹಸುಗಳನ್ನು ಪಡೆದುಕೊಂಡು ಅವುಗಳನ್ನು ಸಾಕುತ್ತಿದ್ದರೆ ಆ ಆರು ಹಸುಗಳಲ್ಲಿ ಒಂದು ಹಸುವಿನ ಹಾಲನ್ನು ತನ್ನ ಜೀವನಕ್ಕಾಗಿ ಉಪಯೋಗಿಸಿಕೊಳ್ಳಬಹುದು. ನೂರು ಹಸುಗಳನ್ನು ಸಾಕುತ್ತಿದ್ದರೆ ಒಂದು ಹಸುವನ್ನೂ ಮತ್ತು ಒಂದು ಎತ್ತನ್ನೂ ತನ್ನ ಜೀವನಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಅಥವಾ ನೂರು ಹಸುಗಳ ಹಾಲು, ತುಪ್ಪ-ಇತ್ಯಾದಿಗಳಿಂದ ಲಭ್ಯವಾಗುವ ಒಟ್ಟು ಮೌಲ್ಯದಲ್ಲಿ ಏಳನೆಯ ಒಂದು ಭಾಗವನ್ನು ವೈಶ್ಯನು ತನ್ನ ಜೀವನಕ್ಕಾಗಿ ಇಟ್ಟುಕೊಳ್ಳಬಹುದು.
೫. ಸತ್ತುಹೋದ ಹಸುಗಳ ಕೊಂಬುಗಳ ಮಾರಾಟದಿಂದ ಬರುವ ಹಣದಲ್ಲಿ ಏಳನೆಯ ಒಂದು ಭಾಗವನ್ನೂ, ಗೊರಸುಗಳ ಮಾರಾಟದಿಂದ ಬರುವ ಹಣದಲ್ಲಿ ಹದಿನಾರನೆಯ ಒಂದು ಭಾಗವನ್ನೂ ವೈಶ್ಯನು ತನ್ನ ಜೀವಿಕೆಗಾಗಿ ಇಟ್ಟುಕೊಳ್ಳಬಹುದು.
೬. ವೈಶ್ಯನು ಬೆಳೆಯುವ ಸಕಲ ವಿಧವಾದ ಆಹಾರಧಾನ್ಯಗಳಲ್ಲಿಯೂ ಈ ವಿಧವಾದ ಹದಿನಾರನೆಯ ಒಂದು ಭಾಗವನ್ನೇ ಅವನು ಪಡೆದುಕೊಳ್ಳಬೇಕು. ಇದು ಅವನ ವಾರ್ಷಿಕವೇತನವಾಗಿರುತ್ತದೆ.
೭. ವೈಶ್ಯನೆಂದಿಗೂ ಪಶುಗಳನ್ನು ರಕ್ಷಣೆ ಮಾಡುವುದಿಲ್ಲವೆಂಬ ಆಶಯವನ್ನು ಹೊಂದಲೇಬಾರದು. ಎಲ್ಲಿಯವರೆಗೆ ವೈಶ್ಯನು ಪಶುಗಳನ್ನು ಸಾಕಲು ಇಚ್ಛೆಪಡುವನೋ- ಅಲ್ಲಿಯವರೆಗೂ ಪಶುಗಳ ರಕ್ಷಣಾಕಾರ್ಯವನ್ನು ಬೇರೆಯವರಿಗೆ ಯಾವುದೇ ಕಾರಣದಿಂದಲೂ ವಹಿಸಿಕೊಡಬಾರದು.
#ಮಹಾಭಾರತದ_ಉಪದೇಶಗಳು
👍
1